ಮದ್ದೂರಿನ ಸಂಜಯ ಚಿತ್ರಮಂದಿರದಲ್ಲಿ ಯುವ ನಟ ಪ್ರಮೋದ್ ನಾಯಕನಾಗಿ ನಟಿಸಿರುವ ‘ಬಾಂಡ್ ರವಿ’ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರಕ್ಕಾಗಿ ಬಂದ ನಾಯಕ ಪ್ರಮೋದ್ ಅವರನ್ನು ಬರಮಾಡಿಕೊಂಡ ಅಭಿಮಾನಿಗಳು ಅದ್ದೂರಿಯಾಗಿ ಬೃಹತ್ ಹಾರ ಹಾಕಿ ಸ್ವಾಗತಿಸಿದರು.
ಮದ್ದೂರು ತಾಲ್ಲೂಕಿನ ಯುವ ಪ್ರತಿಭೆ ಪ್ರಮೋದ್ ಅವರ ಕಟೌಟ್ ಗಳನ್ನು ಚಿತ್ರಮಂದಿರದ ಸುತ್ತ ಹಾಕಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಯುವಕರು, ಅಭಿಮಾನಿಗಳು ನಾಯಕ ಪ್ರಮೋದ್ ಅವರಿಗೆ ಹಸ್ತಲಾಘವ ನೀಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಂಡ್ ರವಿ ಚಿತ್ರದ ನಾಯಕ ಪ್ರಮೋದ್, ನಮ್ಮೂರಿನ ಹುಡುಗರು ಒಳ್ಳೆಯ ಚಿತ್ರವನ್ನು ಮಾಡಿ ಎಂದು ಹೇಳುತ್ತಿದ್ದರು. ಸುಮ್ಮನೆ ಚಿತ್ರ ಮಾಡಲು ಸಾಧ್ಯವಿಲ್ಲ, ಒಂದು ತುಂಬಾ ಚೆನ್ನಾಗಿರುವ ಕಥೆ ಬೇಕು, ಕಥೆಗೆ ಮಾಸ್ ಇರಬೇಕು, ಮಾಸ್ ಗೆ ತಕ್ಕಂತೆ ಸಂಭಾಷಣೆ, ಹಾಡುಗಳು ಸಹ ಇರಬೇಕು ಎಂದು ಕೊಂಡಾಗ ಈ ಕಥೆ ಸಿಕ್ಕಿತು. ತುಂಬಾ ಅದ್ಭುತವಾಗಿ ಚಿತ್ರ ಮೂಡಿ ಬಂದಿದೆ ಎಂದರು.
ಈ ಚಿತ್ರ ರಾಜ್ಯ ವ್ಯಾಪಿ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,ಒಳ್ಳೆಯ ಓಪನಿಂಗ್ ಸಿಕ್ಕಿದೆ. ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂಬ ಪ್ರಶಂಸೆಗಳು ಎಲ್ಲಾ ಕಡೆ ಕೇಳಿ ಬರುತ್ತಿದೆ. ಯುವ ನಟನಾದ ನನ್ನನ್ನು ಎಲ್ಲರೂ ಬೆನ್ನು ತಟ್ಟಿ ಬೆಳೆಸಬೇಕು. ಪ್ರತಿಯೊಬ್ಬ ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದರ ಮೂಲಕ ನನ್ನ ಬೆಳವಣಿಗೆಗೆ ಒಂದು ಸದಾವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಚಿತ್ರದ ನಿರ್ದೇಶಕ ಪ್ರಜ್ವಲ್ ಮಾತನಾಡಿ, ಬಾಂಡ್ ರವಿ ಪ್ರಮೋದ್ ಅವರನ್ನು ಚಿತ್ರರಂಗದಲ್ಲಿ ದೊಡ್ಡ ಬಾಂಡ್ ಆಗಿ ಬೆಳೆಸುವುದು ನಿಮ್ಮ ಕೈಯಲ್ಲಿದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು,ಪ್ರಮೋದ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲೆ ಸದಾ ಇರಬೇಕು. ಪ್ರತಿಯೊಬ್ಬರೂ ತಪ್ಪದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದರ ಮೂಲಕ ಯುವ ನಟನಿಗೆ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು, ಸಿನಿಮಾ ಪ್ರೇಕ್ಷಕರು, ಯುವಕರು ಉಪಸ್ಥಿತರಿದ್ದರು.