ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸಿದ ಬೂದನೂರು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ)ಗೆ 10 ಸಾವಿರ ದಂಡ ವಿಧಿಸಿ ಮಂಡ್ಯ ಜಿಪಂ ದೂರು ನಿವಾರಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಕೆ.ಕರಿಯಪ್ಪ ಅವರು, ಪಿಡಿಒ ವಿನಯ್ ಕುಮಾರ್ ಅವರಿಗೆ ದಂಡ ವಿಧಿಸಿದ್ದು, 30 ದಿನದೊಳಗೆ ಜಿಪಂ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಸೂಚಿಸಿದ್ದಾರೆ.
ತಮ್ಮ ಮನೆ ಬಳಿ ಚರಂಡಿ ಕಾಮಗಾರಿ ಕೈಗೊಂಡಿದ್ದು, ಪೂರ್ಣಗೊಳಿಸದೆ ನೀರು ಸರಾಗವಾಗಿ ಹರಿಯದೆ ನಿಂತು ರೋಗರುಜಿನಗಳಿಗೆ ಕಾರಣವಾಗಿದೆ ಎಂದು ಗ್ರಾಮದ ಬಿ.ಎಸ್.ಚಂದ್ರಶೇಖರ ಎಂಬುವವರು ದೂರು ಸಲ್ಲಿಸಿದ್ದರು.
ಈ ವಿಚಾರವಾಗಿ ಮಹಾತ್ಮಗಾಂಧಿ ನರೇಗಾ ಹಾಗೂ 13ನೇ ಹಣಕಾಸು ಯೋಜನೆಯಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಸದಸ್ಯರೊಬ್ಬರ ಅಕ್ಷೇಪಣೆ ಮುಂದಿಟ್ಟುಕೊಂಡು ಅನುಪಾಲನಾ ವರದಿಗೆ ತದ್ವಿರುದ್ಧವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಗ್ರಾಪಂ ಸಭೆಗೆ ತಪ್ಪು ಮಾಹಿತಿ ನೀಡಿದ್ದಲ್ಲದೆ ಪ್ರಾಧಿಕಾರದ ನಿರ್ದೇಶನವನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಪ್ರಕರಣ 296(ಎ)ಯ ಉಪ ಪ್ರಕರಣ (7)ದ ಅಡಿಯಲ್ಲಿ ಪಿಡಿಒ ನಿರ್ವಹಿಸಬೇಕಾದ ಕರ್ತವ್ಯವನ್ನು ಕಡೆಗಣಿಸಿರುವುದು ಹಾಗೂ ನಿರಾಕರಿಸಿ, ನಿಗದಿತ ಸಮಯದೊಳಗೆ ಅನುಷ್ಠಾನ ಮಾಡಲು, ದುರ್ಭಾವನೆಯಿಂದ ಪಿಡಿಒ ಅಲ್ಲಗೆಳೆದಿದ್ದಾರೆಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.