ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಪರಿನಿಬ್ಬಾಣ ದಿನಗಳನ್ನು ವಿಜೃಂಭಣೆಯಿಂದ ಆಚರಿಸಿದರೆ ಸಾಲದು, ಮನೆ, ಮನಗಳಲ್ಲಿ ಬುದ್ಧ, ಅಂಬೇಡ್ಕರ್ ಅವರ ವೈಜ್ಞಾನಿಕ ಅನುಕರಣೆ ಮತ್ತು ಆದರ್ಶ ಪಾಲಿಸುವುದು ಅಗತ್ಯ ಎಂದು ಪರಿವರ್ತನಾ ಸೇವಾ ಸಂಸ್ಥೆ ಕಾರ್ಯದರ್ಶಿ ಟಿ.ಡಿ.ನಾಗರಾಜು ಹೇಳಿದರು.
ಮಂಡ್ಯ ನಗರದಲ್ಲಿರುವ ಎವಿಎಸ್ಎಸ್ ಕಚೇರಿಯಲ್ಲಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ತಾಲೂಕು ಶಾಖೆ ಆಯೋಜಿಸಿದ್ದ ನ.7 ಅಂಬೇಡ್ಕರ್ ಅವರು ಸರ್ಕಾರಿ ಶಾಲೆಗೆ ಪ್ರವೇಶ ಪಡೆದ ಸುದಿನ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಪರಿಕರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಗವಾನ್ ಬುದ್ಧರ ವೈಜ್ಞಾನಿಕ ಚಿಂತನೆಗಳು ಮತ್ತು ಅಂಬೇಡ್ಕರ್ ಅವರ ತತ್ವ-ಸಿದ್ದಾಂತಗಳು, ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶನವಾಗಿದೆ, ಅವನ್ನು ಸಮಗ್ರವಾಗಿ ಅನುಸರಿದರೆ ಯಶಸ್ಸು ಸಾಧ್ಯ, ಸೋಲು ಎಂಬ ಮಾತೇ ಇಲ್ಲ, ಅನುಕರಣೆಯೊಂದೇ ಮಾರ್ಗ ಎಂದು ನುಡಿದರು.
ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಗುರುಶಂಕರ್ ಮಾತನಾಡಿ, ನ.7ರಂದು ಅಂಬೇಡ್ಕರ್ ಸರ್ಕಾರಿ ಶಾಲೆಗೆ ಪ್ರವೇಶ ಪಡೆದ ಸುದಿನವಾಗಿದ್ದು, ರಾಷ್ಟ್ರೀಯ ವಿದ್ಯಾರ್ಥಿ ದಿವಸ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಗಣ್ಯರು ನೋಟ್ಬುಕ್ ಮತ್ತು ಪರಿಕರಗಳನ್ನು ನೀಡಿ, ಸಿಹಿ ವಿತರಿಸಿದರು.ಕಾರ್ಯಕ್ರಮದಲ್ಲಿ ಎವಿಎಸ್ಸೆಸ್ ಸದಸ್ಯರಾದ ಜಯಶಂಕರ್, ಮುರುಗನ್, ಕುಮಾರ್, ಸೋಮಶೇಖರ್, ಸ್ವಾಮಿ, ಸಂಘದ ಇಸಿಓ ವರಲಕ್ಷ್ಮಿ ಮತ್ತಿತರು ಉಪಸ್ಥಿತರಿದ್ದರು.