ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರವನ್ನು ಹಾಕುವಂತೆ ಆದೇಶ ನೀಡಿದ್ದರೂ, ಮಂಡ್ಯ ಜಿಲ್ಲಾಡಳಿತ ತನ್ನ ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರಗಳನ್ನು ಅಳವಡಿಸದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ಲಿಂಗಾಯತ ಮಹಾಸಭಾ ಬಸವ ತತ್ವಗಳ ಜನ ಜಾಗೃತಿ ಸಂಘಟನೆಯ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎಂ ಬೆಟ್ಟಹಳ್ಳಿ ಎಂ ಎಸ್ ಮಂಜುನಾಥ್ ಆಪಾದಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವೇಶ್ವರರ ಭಾವಚಿತ್ರ ಅಳವಡಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮಂಡ್ಯ ಜಿಲ್ಲಾಡಳಿತ ಸರ್ಕಾರದ ಆದೇಶವನ್ನು ಪಾಲನೆ ಮಾಡಿಲ್ಲ, ಇದು ಖಂಡನೀಯ, ಇಂತಹ ನಿರ್ಲಕ್ಷ್ಯ ಮುಂದುವರಿದರೆ, ಜಿಲ್ಲಾಡಳಿತದ ವಿರುದ್ದವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೂಡಲೇ ಸರ್ಕಾರದ ಆದೇಶವನ್ನು ಪಾಲಿಸಿ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ ಅವರು, ಬಸವ ಜಯಂತಿಗೆ ಎಲ್ಲಾ ಸಂಘಟನೆಗಳನ್ನು ಕರೆಯಬೇಕು. ಪೂರ್ವಭಾವಿ ಸಭೆಯನ್ನು ನಡೆಸಬೇಕು ಎಂದು ತಾಕೀತು ಮಾಡಿದರು .
ತಿಪಟೂರಿನಲ್ಲಿ ಬಸವಣ್ಣನವರ ಪುತ್ಥಳಿಯನ್ನು ತೆರವು ಮಾಡಿರುವ ಕ್ರಮ ಖಂಡನೀಯ. ಈ ಬಗ್ಗೆ ಅಲ್ಲಿನ
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಹಾಗೂ ಅದೇ ಸ್ಥಳದಲ್ಲಿ ಪುತ್ಥಳಿ ನಿರ್ಮಿಸುವಂತೆ ಆಗ್ರಹ ಪಡಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯೋಗ ಗುರು ಹೆಚ್ ವಿ ಶಿವರುದ್ರಸ್ವಾಮಿ, ಸಿ ಮಾದಪ್ಪ, ಗೌರಿಶಂಕರ್, ಬೆಳ್ಳಪ್ಪ, ನಂದೀಶ್, ಚುಂಚಯ್ಯ ಉಪಸ್ಥಿತರಿದ್ದರು.