ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಂಡ್ಯನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಸರ್ ಎಂ.ವಿ ಪ್ರತಿಮೆ ಬಳಿ ಇಬ್ರಾಹಿಂ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಖಾಸಗೀ ಬದುಕಿನ ಕುರಿತಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಯನ್ನು ಖಂಡಿಸಿದರು. ನಾಥ ಸಂಪ್ರದಾಯದ ಪ್ರಮುಖರೂ ಆದ ಯೋಗಿ ಆದಿತ್ಯನಾಥ್ ಅವರು ಕೇವಲ ಗೋರಖ್ಪುರದ ಮಠಾಧೀಶರು ಮಾತ್ರವಲ್ಲ, ಮಂಗಳೂರಿನ ಕದ್ರಿಯಲ್ಲೂ ನಾಥ ಸಂಪ್ರದಾಯದ ಯೋಗೇಶ್ವರ ಮಠ ಇದೆ. ಆದಿಚುಂಚನಗಿರಿ ಶ್ರೆಕ್ಷೇತ್ರವೂ ಸಹ ನಾಥ ಪರಂಪರೆಯ ಮಠಗಳಲ್ಲೊಂದಾಗಿದೆ. ಯೋಗಿಆದಿತ್ಯನಾಥ್ ಅವರು ಕದ್ರಿ ಯೋಗೇಶ್ವರ ಮಠದ ರಾಜರ ಆಯ್ಕೆ ಮತ್ತು ಪಟ್ಟಾಭಿಷೇಕ 12 ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತಿದೆ. ಶೃಂಗೇರಿ ಮಠದಲ್ಲಿ ವಿದ್ಯಾಭ್ಯಾಸ ಪಡೆದಿರುವ ಸಿ.ಎಂ. ಇಬ್ರಾಹಿಂ ಅವರು ನಾಥ ಪರಂಪರೆಯ ಬಗ್ಗೆ ತಿಳಿದಿದ್ದರೂ ಇಂತಹ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಆದಿಚುಂಚನಗಿರಿ ಮಠದ ಬಗ್ಗೆ ಅಪಾರವಾದ ಭಕ್ತಿಯನ್ನು ಇಟ್ಟುಕೊಂಡಂತೆ ನಟಿಸುವ ಜೆಡಿಎಸ್ ವರಿಷ್ಠರು, ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ಇಂತಹ ಅವಹೇಳನಕಾರಿಯಾಗಿ ಮಾತನಾಡಿದ್ದರೂ, ಅವರನ್ನು ಇನ್ನೂ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವುದನ್ನು ಬಿಟ್ಟು ನಿರ್ಲಕ್ಷ್ಯ ವಹಿಸುವ ಮೂಲಕ ನಾಥ ಪರಂಪರೆಗೆ ಅಪಮಾನ ಮಾಡಿದ್ದಾರೆ, ಮಠಕ್ಕೆ ಅಪಮಾನ ಮಾಡಿರುವ ಜೆಡಿಎಸ್ಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಸ್ವಲ್ಪವಾದರೂ ಗೌರವವಿದ್ದರೆ ತಕ್ಷಣ ಸಿ.ಎಂ.ಇಬ್ರಾಹಿಂ ಅವರನ್ನು ಪದಚ್ಯುತಿಗೊಳಿಸುವಂತೆ ಆಗ್ರಹಿಸಿದರು. ಸಿ.ಎಂ.ಇಬ್ರಾಹಿಂ ಅವರಿಗೆ ಐವರು ಪತ್ನಿಯರಿದ್ದು, ಈ ಹಿನ್ನೆಲೆಯಲ್ಲಿ ಐದು ಮಂದಿ ಮಹಿಳೆಯರು ಬುರ್ಕಾ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ವಕ್ತಾರ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮನ್ಮುಲ್ ನಿರ್ದೇಶಕಿ ರೂಪ, ಮುಖಂಡರಾದ ಡಾ. ಇಂದ್ರೇಶ್, ಸಾದೊಳಲು ಸ್ವಾಮಿ, ಮಳವಳ್ಳಿ ಮುನಿರಾಜು, ಮಲ್ಲಿಕಾರ್ಜುನ್ (ಫೈಟರ್ ರವಿ), ಎಚ್.ಆರ್.ಅರವಿಂದ್, ಅಶೋಕ್ ಜಯರಾಂ, ಸಿ.ಟಿ. ಮಂಜುನಾಥ್, ಶಿವಣ್ಣ, ವಿದ್ಯಾ ನಾಗೇಂದ್ರ, ಪ.ನ.ಸುರೇಶ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.