Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ಯಾನ್ಸರ್ ಮತ್ತು ಭವಿಷ್ಯದಲ್ಲಿ ಆರೋಗ್ಯದ ಸವಾಲುಗಳು……

ವಿವೇಕಾನಂದ ಎಚ್.ಕೆ

ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ…….

ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ….

ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ ನಿರ್ಧಿಷ್ಟ ಕಾರಣಗಳ ಬಗ್ಗೆ ಸಂಶೋಧನೆ ಮಾಡಿ ಒಂದು ವರದಿ ಪ್ರಕಟಿಸುತ್ತದೆ. ಅದರಲ್ಲಿ ಬಂದ ಫಲಿತಾಂಶ….

ಶೇಕಡಾ 80% ರಷ್ಟು ಜನರಿಗೆ ಈ ಖಾಯಿಲೆ ಬೆಳವಣಿಗೆ ಹೊಂದಲು ನಿರ್ಧಿಷ್ಟ ಕಾರಣಗಳು ಇವೆ. ಉಳಿದ 20% ರಷ್ಟು ಜನರಿಗೆ ಏಕೆ ಬಂದಿದೆ ಎಂಬುದು ಅರ್ಥವಾಗುತ್ತಿಲ್ಲ.
ಸದ್ಯಕ್ಕೆ ” ದುರಾದೃಷ್ಟ ” ಎಂದಷ್ಟೇ ಹೇಳಬೇಕಾಗುತ್ತದೆ ಎಂಬ ವರದಿ ನೀಡಿದೆ.
ಯಾವುದೇ ಮಾನದಂಡಗಳಿಂದ ನೋಡಿದರೂ ಒಬ್ಬ ವ್ಯಕ್ತಿಗೆ ಒಂದು ರೀತಿಯ ಕ್ಯಾನ್ಸರ್ ಬರಲೇಬಾರದು ಎಂದಿದ್ದರೂ ಆತನಿಗೆ ಬಂದಿರುವ ಆಶ್ಚರ್ಯಕರ ಸಂಗತಿ ಈ ಸಂಶೋಧನೆಯಲ್ಲಿ ಕಂಡುಬಂದಿದೆ…..

ಇದರ ಒಟ್ಟು ಸಾರಾಂಶ,
ಯಾರಿಗೆ ಬೇಕಾದರೂ ಬರಬಹುದು ಮತ್ತು ಯಾವಾಗ ಬೇಕಾದರೂ ಬರಬಹುದಾದ ಖಾಯಿಲೆ ಕ್ಯಾನ್ಸರ್….

ಇದರ ಜೊತೆಗೆ
ಮನುಷ್ಯರ ಮೂಲಭೂತ ಅವಶ್ಯಕತೆಗಳಾದ ಗಾಳಿ ನೀರು ಆಹಾರದ ಮಲಿನತೆಯಿಂದಾಗಿ ಕ್ಯಾನ್ಸರ್ ಬಹುಬೇಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂಬುದು ವಾಸ್ತವಾಂಶ. ಕ್ಯಾನ್ಸರ್ ಕಾರಕ ಅಂಶಗಳು ದೇಹದಲ್ಲಿ ಅಭಿವೃದ್ಧಿ ಹೊಂದಲು ಈ ಮಾಲಿನ್ಯನ ಕೊಡುಗೆ ತುಂಬಾ ಇದೆ……

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ, ಅಜ್ಞಾನ, ಮೂಢನಂಬಿಕೆ, ಬಡತನದ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ, ವೈದ್ಯಕೀಯ ಸೌಲಭ್ಯಗಳು ಇನ್ನೂ ಸಾಕಷ್ಟು ಜನರಿಗೆ ತಲುಪದ ಮತ್ತು ಅತ್ಯಂತ ದುಬಾರಿಯಾಗಿರುವ ವ್ಯವಸ್ಥೆಯಲ್ಲಿ ಇರುವಾಗ ಕ್ಯಾನ್ಸರ್ ಮನುಷ್ಯನ ದೇಹದ ಮೇಲೆ ದಾಳಿ ಮಾಡುವುದರ ಜೊತೆಗೆ ಸಮಾಜದ ಮೇಲೂ ಪರೋಕ್ಷವಾಗಿ ದಾಳಿ ಮಾಡುತ್ತಿದೆ…….

ಅಪಘಾತ, ಅನಾರೋಗ್ಯ, ಅನಿರೀಕ್ಷಿತ, ಅಕಾಲಿಕ ಸಾವು, ಆತ್ಮಹತ್ಯೆ ಮುಂತಾದ ಘಟನೆಗಳು ಕರುಳು ಹಿಂಡುವ ಸನ್ನಿವೇಶ ಸೃಷ್ಟಿ ಮಾಡುತ್ತವೆ.

ಸತ್ತ ವ್ಯಕ್ತಿ ಇನ್ನೆಂದೂ ಬರುವುದಿಲ್ಲ ಎಂಬುದು ಒಂದು ಕಡೆ, ಸ್ವತಃ ನಮ್ಮ ಸಾವು ಈ ಲೋಕದಿಂದ ನಮ್ಮನ್ನು ಶಾಶ್ವತವಾಗಿ ಇಲ್ಲವಾಗಿಸುತ್ತದೆ ಎಂಬ ಅರಿವು ನಮಗಿರುವುದರಿಂದ ಅದು ಉಂಟುಮಾಡುವ ಭಯ, ಸಾವು ಅನಿವಾರ್ಯ ಎಂದು ಭಾವಿಸಿ ಆಧ್ಯಾತ್ಮಿಕ ಭಾವನೆಯಿಂದ ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದಾದರೂ ನಮ್ಮ ಸಮಾಜದ ಒಟ್ಟು ವಾತಾವರಣ ಅಷ್ಟೊಂದು ಉತ್ತಮವಾಗಿಲ್ಲದಿರುವುದರಿಂದ ನಮ್ಮ ಪ್ರೀತಿ ಪಾತ್ರರು ಭವಿಷ್ಯದಲ್ಲಿ ಅನುಭವಿಸಬಹುದಾದ ಕಷ್ಟಗಳನ್ನು ನೆನೆದು ನಮ್ಮ ನೋವು ಆತಂಕ ಮತ್ತಷ್ಟು ಹೆಚ್ಚಾಗುತ್ತದೆ…..

ಈ ಸಾವಿನ ನೋವಿಗೆ ಪರಿಹಾರವೇನು ?

ಬಹುತೇಕ ಜಗತ್ತಿನ ಜೀವಿಗಳ ಹೋರಾಟ ಬದುಕಿಗಾಗಿಯೇ ಇರುತ್ತದೆ. ಪ್ರಾಣ ಉಳಿಸಿಕೊಳ್ಳಲು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸುತ್ತಾರೆ ಸಾವು ಖಚಿತ ಎಂದು ತಿಳಿದಿದ್ದರೂ ಮತ್ತು ಸತ್ತ ನಂತರ ಸಾವು ತನ್ನ ಅರಿವಿಗೆ ಬರುವುದಿಲ್ಲ ಎಂದು ಅರ್ಥವಾಗಿದ್ದರೂ…..

ಇತರರ ಸಾವನ್ನು ಮತ್ತು ನಮ್ಮ ಸಾವಿಗೆ ಕೆಲವೇ ಸಮಯವಿದೆ ಎಂದು ತಿಳಿದಾಗ ಅದನ್ನು ಹೆಚ್ಚಿನ ಭಯ ಆತಂಕಗಳಿಲ್ಲದೆ ಘನತೆಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಒಂದು ಬಹುದೊಡ್ಡ ಸವಾಲಿನ ಮಾನಸಿಕ ಸ್ಥಿತಿ. ಸಹಜ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆ ಇಲ್ಲದಿರುವಾಗ ಇದನ್ನು ಹೇಳುವುದು – ಬರೆಯುವುದು – ಬೇರೆಯವರಿಗೆ ಧೈರ್ಯ ತುಂಬುವುದು ಸುಲಭ. ಆದರೆ ಸ್ವತಃ ಅಂತಹ ಸಂದರ್ಭವನ್ನು ಎದುರಿಸುವುದು ಕಷ್ಟ ಕಷ್ಟ.

ಹಣದ ಒತ್ತಡ, ನಮ್ಮ ಸುತ್ತಮುತ್ತಲಿನ ಜನರ ಅಜ್ಞಾನದಿಂದ ಕೂಡಿರುವ ಹಿಂಸಾತ್ಮಕ ಮನೋಭಾವ, ಸಾವಿನ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ಮಾನಸಿಕತೆ, ಅತಿಯಾದ ಭಾವುಕ ಪ್ರೀತಿ ಅಥವಾ ಅಸೂಯಪರ ವ್ಯಂಗ್ಯ, ಪರೋಕ್ಷ ನಿಂದನೆಗಳು, ಕಷ್ಟದ ಸಮಯದಲ್ಲಿ ಸಹಾಯ ಸಾಂತ್ವಾನಕ್ಕೆ ಬರದಿರುವುದು ಮುಂತಾದ ಎಲ್ಲವೂ ಈ ನೋವಿಗೆ ತನ್ನ ಕಾಣಿಕೆ ಸಲ್ಲಿಸುತ್ತವೆ…..

ಕಾರಣಗಳೇನೋ ಪತ್ತೆ ಹಚ್ಚಬಹುದು. ಪರಿಹಾರ……

ಕ್ಯಾನ್ಸರ್ ಮತ್ತು ಆ ರೀತಿಯ ಮಾರಣಾಂತಿಕ ಖಾಯಿಲೆಗಳು ಬರದಂತೆ ತಡೆಯಲು ವೈದ್ಯಕೀಯ ಕ್ಷೇತ್ರ ಹೆಚ್ಚು ಶ್ರಮಪಡಬೇಕು. ಆದರೆ ಖಾಯಿಲೆ ಬಂದ ನಂತರ ಅದನ್ನು ಸ್ವೀಕರಿಸುವ ಮನಸ್ಥಿತಿ ತೀರಾ ಖಾಸಗಿಯಾದದ್ದು. ನಮ್ಮ ನಿಜವಾದ ಜ್ಞಾನದ ಮಟ್ಟ, ನಮ್ಮ ವಾಸ್ತವದ ವ್ಯಕ್ತಿತ್ವ ಅನಾವರಣಗೊಳ್ಳುವುದು ಆಗಲೇ…..

ಅದಕ್ಕಾಗಿಯೇ ದೇವರು, ಧರ್ಮ, ಕರ್ಮ, ಜನ್ಮಾಂತರ, ದೇಹಕ್ಕೆ ಸಾವು ಆತ್ಮಕ್ಕಲ್ಲ ಎಂಬ ವೇದಾಂತ ಎಲ್ಲವನ್ನೂ ಸೃಷ್ಟಿ ಮಾಡಲಾಗಿದೆ. ಇವು ಸಾವಿನ ಭಯವನ್ನು ಎಷ್ಟರಮಟ್ಟಿಗೆ ಕಡಿಮೆ ಮಾಡಿದೆಯೋ ಅದು ಅವರವರ ವೈಯಕ್ತಿಕ ಮನೋಭಾವ ಅವಲಂಬಿಸಿದೆ….

ಆದರೆ ಸಾವಿಗೆ ಸಿದ್ದರಾಗುವ ಮನಸ್ಥಿತಿ ಬೆಳೆಸಿಕೊಂಡು ಸಾವನ್ನು ಘನತೆಯಿಂದ ಸ್ವೀಕರಿಸುವ ವೈಯಕ್ತಿಕ, ಕೌಟುಂಬಿಕ ಹಾಗು ಒಟ್ಟು ಸಮಾಜದ ಸಾಮೂಹಿಕ ಪ್ರಯತ್ನಗಳು ನಡೆಯಬೇಕಿದೆ. ಇದು ನಮ್ಮ ಆ ನೋವುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು…..

ಕೆಲವು ಪ್ರಖ್ಯಾತರು ಅಪಾರ ಹಣ, ಒಂದಷ್ಟು ಯಶಸ್ಸು, ಸಾವಿನೊಂದಿಗೆ ಸೆಣೆಸಾಟ ವೃತ್ತಿ ಎಲ್ಲವೂ ಅನುಭವಿಸಿರುವ ಕಾರಣ ಮಾಧ್ಯಮಗಳ ಮುಂದೆ ಧೈರ್ಯ ಪ್ರದರ್ಶಿಸಬಹುದು. ಆದರೆ ಖಾಸಗಿಯಾಗಿ, ಒಂಟಿತನದ ಸಮಯದಲ್ಲಿ ಅವರು ಅನುಭವಿಸುತ್ತಿರುವ ನೋವು ನಮ್ಮ ಊಹೆಗೆ ನಿಲುಕುವುದಿಲ್ಲ.ಇನ್ನು‌ ಸಾಮಾನ್ಯ ಜನರ ಪಾಡು ………..

ಎಷ್ಟೇ ಬರೆದರೂ ಸಾವಿನ ನಿರೀಕ್ಷೆಯ ಕ್ಷಣಗಳು, ಅದರ ಒತ್ತಡ, ಸಾವಿನ ಸ್ವೀಕಾರದ ಸ್ಥಿತ ಪ್ರಜ್ಞತೆ, ಅದಕ್ಕೆ ಇರಬಹುದಾದ ಪರಿಹಾರ ಇವುಗಳನ್ನು ಅಕ್ಷರಗಳಲ್ಲಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!