ವೇಗವಾಗಿ ಬರುತ್ತಿದ್ದ ಕಾರೊಂದು ಆಟೋಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಆಟೋದಲ್ಲಿದ್ದ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಮದ್ದೂರು ತಾಲ್ಲೂಕಿನ ದಂಡನಹಳ್ಳಿ ಬಳಿ ಸಂಭವಿಸಿದೆ.
ಮೃತ ಮಹಿಳೆಯನ್ನು ಮೈಸೂರಿನ ವೀರನಗೆರೆ ನಿವಾಸಿ ಉಮಾ ಎಂದು ಗುರುತಿಸಲಾಗಿದೆ.
ಮೈಸೂರಿನ ಉಮಾ ಅವರು ಸ್ನೇಹಿತೆಯರಾದ ಸಿಂಧು ಮತ್ತು ಅನಿತಾ ರವರ ಜೊತೆ ಚನ್ನಪಟ್ಟಣ ತಾಲೂಕಿನ ಕೆ. ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ದೇವರ ದರ್ಶನ ಮುಗಿಸಿಕೊಂಡು ಪ್ಯಾಸೆಂಜರ್ ಆಟೋದಲ್ಲಿ ಮದ್ದೂರಿಗೆ ಬರುತ್ತಿದ್ದಾಗ, ದುಂಡನ ಹಳ್ಳಿ ಬಳಿ ತುಮಕೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಹುಂಡೈ ಐ 20 ಕಾರು ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಕುಳಿತಿದ್ದ ಉಮಾ ಅವರು ಟಾರ್ ರಸ್ತೆಗೆ ಬಿದ್ದ ಪರಿಣಾಮ ಅವರ ತಲೆ ಒಡೆದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆಟೋದಲ್ಲಿದ್ದ ಉಮಾ ಅವರ ಸ್ನೇಹಿತೆಯರಾದ ಸಿಂಧು ಮತ್ತು ಅನಿತಾ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಮದ್ದೂರು ಠಾಣೆಯ ಸಿಪಿಐ ವೆಂಕಟೇಗೌಡ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಉಮಾ ಅವರ ಮೃತದೇಹವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟರು.