ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಶನಿವಾರ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ರೈತ ಮಹಿಳೆಯರಾದ ಪ್ರಭಾವತಿ ವೀರಪ್ಪ,ಕೋಕಿಲ,ವಾಣಿ,ಜಿ.ಪಿ ಕಲ್ಪನಾ, ಲಿಂಗಮ್ಮ, ಅಶ್ವಿನಿ ಚಂದ್ರಶೇಖರ್, ಸುಕನ್ಯ, ಎಸ್.ಎಲ್ ಅಶ್ವಿನಿ, ಮಾನಸ ಭಾಗಿಯಾಗಿ ಉಪವಾಸ ಕೈಗೊಂಡರು.
ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು, ಮೇಕೆದಾಟು ಯೋಜನೆ ಜಾರಿ ಮಾಡಬೇಕು,ಕಾವೇರಿ ಸಂಕಷ್ಟ ಸನ್ನಿವೇಶದಲ್ಲಿ ನ್ಯಾಯ ದೊರಕಿಸಿಕೊಡಲು ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಕಾವೇರಿ ನದಿ ನೀರು ವಿಚಾರವಾಗಿ ಶಾಸಕ ಎಚ್ ಟಿ ಮಂಜು ದನಿ ಎತ್ತಿದಾಗ ಸಭಾಧ್ಯಕ್ಷರು ಬೇಗ ಬೇಗ ಎಂದು ಹೇಳುವ ಮೂಲಕ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ, ನಾಡು, ನುಡಿ, ನೆಲ, ಜಲ ವಿಚಾರದಲ್ಲಿ ಅಸಡ್ಡೆ ಸರಿಯಲ್ಲ, ಸದನದಲ್ಲಿ ಗಂಭೀರವಾಗಿ ಚರ್ಚಿಸಿ ಕಾವೇರಿ ವಿಚಾರದಲ್ಲಿ ಕಾನೂನಾತ್ಮಕ ಹಾಗೂ ಕಾನೂನೇತರ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ,ಚಳವಳಿ ಬಗ್ಗೆ ನಿರ್ಲಕ್ಷ್ಯ ಸಲ್ಲದು, ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು, ಕನ್ನಡ ನಾಡು ಏಕೀಕರಣಗೊಂಡದ್ದು ಹೋರಾಟದಿಂದಲೇ ಎಂಬ ಅರಿವು ಸರ್ಕಾರಕ್ಕೆ ಇರಬೇಕು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್,ಮುದ್ದೇಗೌಡ, ಮೊತ್ತಹಳ್ಳಿ ಕೆಂಪೇಗೌಡ, ಬಸವೇಗೌಡ ನೇತೃತ್ವ ವಹಿಸಿದ್ದರು.