ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೂಡಿಕೆ ಮಾಡಿರುವ ವಿವರಗಳನ್ನು ಒದಗಿಸುವಂತೆ ಕಾಂಗ್ರೆಸ್ ಮಾಲಿಕತ್ವದ ಮಲಯಾಳಂ ಸುದ್ದಿ ವಾಹಿನಿ ‘ಜೈಹಿಂದ್ ಟಿವಿ’ಗೆ ಸಿಬಿಐ ನೋಟಿಸ್ ನೀಡಿದೆ.
ಜನವರಿ 11ರಂದು ತನಿಖಾಧಿಕಾರಿಗಳು ಕೋರಿದ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಅವರಿಗೆ ಸಿಬಿಐ ಸೂಚಿಸಿದೆ ಎಂದು ತಿಳಿದು ಬಂದಿದೆ.
ಡಿ.ಕೆ ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್, ಮಗ ಮತ್ತು ಇತರ ಕುಟುಂಬ ಸದಸ್ಯರು ಮಾಡಿರುವ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶ, ಷೇರು ವಹಿವಾಟು, ಹಿಡುವಳಿ ವಿವರಗಳು, ಅವರ ಲೆಡ್ಜರ್ ಖಾತೆಗಳು ಮತ್ತು ಒಪ್ಪಂದದ ಟಿಪ್ಪಣಿಗಳ ವಿವರಗಳನ್ನು ಒದಗಿಸುವಂತೆ ಸಿಬಿಐ ಜೈ ಹಿಂದ್ ಚಾನೆಲ್ನ ಆಡಳಿತ ಮಂಡಳಿಗೆ ಕೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸಿಬಿಐ 2020ರಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿತ್ತು, 2013- 2018 ರ ನಡುವೆ ಅವರು ಸುಮಾರು 74 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಇದು ಅವರ ಆದಾಯವನ್ನು ಮೀರಿದೆ ಎಂದು ಆರೋಪಿಸಲಾಗಿದೆ.
“ನಮ್ಮ ಸಂಸ್ಥೆ ಹಣಕಾಸು ಮತ್ತು ಇತರ ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಿದೆ. ಸಿಬಿಐ ಕೇಳಿರುವ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ” ಜೈಹಿಂದ್ ಚಾನೆಲ್ ಮುಖ್ಯಸ್ಥ ಮತ್ತು ಕೇರಳದ ಕಾಂಗ್ರೆಸ್ ನಾಯಕ ಬಿ.ಎಸ್.ಶಿಜು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಜೈಹಿಂದ್ ಚಾನೆಲ್ ಅನ್ನು 2007ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿಪಿಐ(ಎಂ) ನಡೆಸುತ್ತಿರುವ ‘ಕೈರಲಿ ಟಿವಿ’ಗೆ ಪ್ರತಿಯಾಗಿ ಪ್ರಾರಂಭಿಸಿದ್ದರು. ಪಕ್ಷಗಳು ಚಾನೆಲ್ಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ, ಪಕ್ಷದ ಮುಖಂಡರು ಒಟ್ಟಾಗಿ ಚಾನೆಲ್ ಪ್ರಾರಂಭಿಸಲು ಕಂಪನಿಯನ್ನು ರಚಿಸಿದ್ದರು.