ಕೋಮುವಾದದ ಭಾಷಣದ ಮೂಲಕ ಕೋಮು ಭಾವನೆ ಭಿತ್ತಿ ಜನಸಾಮಾನ್ಯರ ಸಾಮರಸ್ಯ ಬದುಕಿಗೆ ಧಕ್ಕೆ ತರುತ್ತಿರುವ ಚಕ್ರವರ್ತಿ ಸೂಲಿಬೆಲೆ ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹಾಕಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿಯ ಕಾರ್ಯಕರ್ತರು ಪ್ರತಿಭಟಿಸಿ ಚಕ್ರವರ್ತಿ ಸೂಲಿಬೆಲೆ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಚೇಷ್ಟೆಗೆ ಅವಕಾಶ ಬೇಡ
ಮಂಡ್ಯ ಜಿಲ್ಲೆ ಸ್ವಾಭಿಮಾನ, ಸ್ವಾಮರಸ್ಯ ಮತ್ತು ಪ್ರೀತಿಗೆ ಹೆಸರುವಾಸಿ ಜಿಲ್ಲೆ, ಇದು ದೇಶಕ್ಕೆ ಗೊತ್ತಿರುವ ವಿಚಾರ, ಕೆಲ ದಿನಗಳ ಹಿಂದೆ ಧ್ವಜದ ವಿಚಾರವಾಗಿ ಕೋಮುವಾದಿಗಳು ಜಾತಿ ವಾದಿಗಳು ದೇಶ ದ್ರೋಹಿಗಳು ರಾಷ್ಟ್ರಧ್ವಜಕ್ಕೆ ಅವಮಾನಿಸಿ ಜಿಲ್ಲೆಯಲ್ಲಿ ಶಾಂತಿ ಕದಡಲು ಮುಂದಾಗಿದ್ದರು ಆದರೆ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದರಿಂದ ದೇಶ ದ್ರೋಹದ ಕುಚೇಷ್ಟೆಯ ಕೆಲಸ ನಡೆಯಲಿಲ್ಲ ಎಂಬುದನ್ನ ಅರಿಯಬೇಕು. ಇದೀಗ ಮತ್ತದೆ ಕೋಮು ಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಕೆಲಸ ಕೋಮುವಾದಿಗಳಿಂದ ನಡೆಯುತ್ತಿದ್ದು, ಮಂಡ್ಯದಲ್ಲಿ ಮಾ.16 ರಂದು ಚಕ್ರವರ್ತಿ ಸೂಲಿಬೆಲೆ ಬಾಷಣ ಆಯೋಜಿಸಲಾಗಿದೆ, ಈತನ ಪ್ರಚೋದಕ ಭಾಷಣ ಜಿಲ್ಲೆಯ ಎಲ್ಲಾ ಜನರ ಸೌಹಾರ್ದಯುತ ಮತ್ತು ಸಾಮರಸ್ಯ ಬದುಕಿಗೆ ಧಕ್ಕೆ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈತ ಇದುವರೆಗೂ ಮಾಡಿರುವ ಭಾಷಣಗಳಲ್ಲಿ ಬರೀ ಸುಳ್ಳುಗಳೇ ಹೆಚ್ಚಾಗಿದೆ, ಲ್ಯಾಪ್ಟಾಪ್ನ ಒಂದೇ ಕನಕ್ಷನ್ನಲ್ಲಿ ದೇಶದ ಎಲ್ಲಾ ಆಸ್ಪತ್ರೆಯನ್ನು ಪ್ರಧಾನ ಮಂತ್ರಿ ಮೋದಿ ನೋಡುತ್ತಾರೆ. ಚಿನ್ನದ ರಸ್ತೆ ನಿರ್ಮಾಣವಾಗಿದೆ, ಟ್ರೈನ್ ಆರನ್ ಸೌಂಡ್ ಕಡಿಮೆ ಮಾಡಲಾಗಿದೆ ಎಂಬ ಹಸಿ ಸುಳ್ಳುಗಳನ್ನು ಹೇಳಿದ್ದಾನೆ. ಸುಳ್ಳುಗಳಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿರುವ ಮತ್ತು ಕೋಮುಭಾವನೆ ಪ್ರಚೋದಿಸುವ ಹಿನ್ನೆಲೆ ಹೊಂದಿರುವ ಈತನನ್ನು ಮಂಡ್ಯ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹಾಕಬೇಕು, ಆ ಮೂಲಕ ಜನರ ಸೌಹಾರ್ದ ಬದುಕು ಸಾಮರಸ್ಯ ಜೀವನಕ್ಕೆ ದಕ್ಕೆ ಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಶಿವರಾಜ್ ಮರಳಿಗ, ಮದ್ದೂರು ಶ್ರೀನಿವಾಸ್, ತಿಮ್ಮೇಶ್, ಗುರುಲಿಂಗಯ್ಯ,ಸವಿತಾ, ರವಿ ನೇತೃತ್ವ ವಹಿಸಿದ್ದರು.