ವಿದ್ಯೆಯಿಂದ ಉದ್ಯೋಗದ ಜೊತೆಗೆ ಸಂಸ್ಕಾರವೂ ಪ್ರಾಪ್ತಿಯಾಗಬೇಕು, ಆಗ ಮಾತ್ರ ಬದುಕಿಗೆ ಸಾರ್ಥಕತೆ ಇರುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿವಿಧ ಪಠ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು
ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಆಶಯ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೂ ವಿಕ್ತತ್ವ ವಿಕಾಸಕ್ಕೆ ಸಹಕಾರಿ. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡದೆ ಸಾಮಾನ್ಯ ಜ್ಞಾನ, ವಿವೇಕ ಬೆಳೆಸಿಕೊಳ್ಳಬೇಕು ಎಂದರು.
ಇದೇ ವೇಳೆ ಕೃಷಿ ಸಚಿವರು ಸಿದ್ದಗಂಗಾ ಹಾಗೂ ಆದಿ ಚುಂಚನಗಿರಿ ಮಠಗಳಲ್ಲಿ ತಾವು ಕಲಿತ ಶಿಕ್ಷಣ , ಸಂಸ್ಕಾರವನ್ನು ಸ್ಮರಿಸಿದರು.
ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆಗೆ ಹೊಸದಾಗಿ ಬಿ.ಎಸ್.ಸಿ, ಎಂ.ಎಸ್.ಸಿ., ಎಂ.ಎಸ್.ಸಿ., ಎಂ.ಎಸ್ .ಡಬ್ಲ್ಯೂ ಮತ್ತಿತರ ಕೋರ್ಸ್ ಗಳನ್ನು ಪ್ರಾರಂಭಿಲಾಗು ವುದು ಎಂದು ಸಚಿವರು ಭರವಸೆ ನೀಡಿದರು.
ಆದಿ ಚುಂಚನಗಿರಿ ಮಠದ ಶ್ರೀನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶೈಕ್ಷಣಿಕ ಮೌಲ್ಯಗಳ ಸ್ವರೂಪ ಅದರ ರಚನಾತ್ಮಕ ಬಳಕೆ ಅಗತ್ಯಗಳ ಬಗ್ಗೆ ವಿವರಿಸಿದರು. ಸಮಾಜದ ಅಭಿವೃದ್ಧಿ ಶಿಕ್ಷಣದ ಮಾರ್ಗವಾಗಬೇಕು .
ಪಡೆದ ಜ್ಞಾನ ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ಬೆಸೆಯುವ ಕೆಲಸ ಮಾಡಬೇಕು. ಶಿಕ್ಷಣ ಸಮಾಜವನ್ನು ಕೆಡವುವ ಕೆಲಸದ ಬದಲು ಕಟ್ಟುವ ಕೆಲಸ ಮಾಡಬೇಕು,ಶಿಕ್ಷಣ ಅದಕ್ಕೆ ಸಾಧನವಾಗಬೇಕು ಎಂದು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಚಂದ್ರಯಾನ -3 ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಇಸ್ರೋ ವಿಜ್ಞಾನಿ ರವಿ ಅವರನ್ನು ಸನ್ಮಾನಿಸಲಾಯಿತು.