ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಮಿತಿ ಮೀರಿದೆ, ಇಂತಹ ಸಂದರ್ಭದಲ್ಲಿ ಉತ್ತಮ ಆಡಳಿತಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ವತಿಯಿಂದ ನಾಗಮಂಗಲ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ 10 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ದೇಶವನ್ನ ಒಡೆಯುವ ಕೆಲಸವನ್ನ ಮಾಡುತ್ತಿದೆ. ಸೂಕ್ತ ಆಡಳಿತ ದೇಶದ ಭದ್ರತೆ ಹಿತದೃಷ್ಟಿಯಿಂದ ಕಾಂಗ್ರೇಸ್ ಪಕ್ಷವನ್ನ ಬೆಂಬಲಿಸಿ, ಭಾರತ್ ಜೋಡೋ ಯಾತ್ರೆಯನ್ನ ಕೈಗೊಳ್ಳುವ ಮೂಲಕ ಕಿರಿಯ ವಯಸ್ಸಿನಲ್ಲಿ ಇಡೀ ದೇಶವನ್ನ ಸುತ್ತಿ ಪಕ್ಷ ಸಂಘಟನೆ ಮಾಡಿರುವ ಕೀರ್ತಿ ನೆಹರು ರವರ ಮೊಮ್ಮಗ ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ. ಚಿಕ್ಕ ವಯಸಿನಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿರುವ ಅವರಿಗೆ ನಾನು ಕೂಡ ಅಭಿನಂದನೆಗಳನ್ನ ತಿಳಿಸುತ್ತೇನೆ, ಚಂದ್ರಶೇಖರ್ ಅವರನ್ನ ಬಿಟ್ಟರೆ ರಾಹುಲ್ ಗಾಂಧಿ ಅವರೇ ದೇಶ ಪ್ರಯಾಣ ಮಾಡಿದವರು ಎಂದು ಸ್ಮರಿಸಿದರು.
ಭಾರತ್ ಜೋಡೋ ಯಾತ್ರೆ 3500 ಕಿ ಲೋ ಮೀಟರ್ ನಡೆದಿದ್ದು ಸುದೀರ್ಘವಾಗಿ ನಡೆದ ಯಾತ್ರೆಯಲ್ಲಿ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದ್ಯಾವಪ್ಪ ಪಾಲ್ಗೊಂಡಿದ್ದು ನಮಗೆ ಖುಷಿ ತಂದಿದೆ. ಪ್ರಸ್ತುತ ಮಂಡ್ಯ ಜಿಲ್ಲೆಯಾದ್ಯಂತ ಕಾಂಗ್ರೆಸ ಪಾದಯಾತ್ರೆ ಮಾಡಬೇಕಿತ್ತು ಆದರೆ ಸಮಯದ ಅಭಾವ ಇರುವುದರಿಂದ 2 ಕ್ಷೇತ್ರಗಳಷ್ಟೆ ಪಾದಯಾತ್ರೆ ನಡೆಯಲಿದೆ ಎಂದರು.
ಆದಿಚುಂಚನಗಿರಿ ಕಾಲಬೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರಂಭ ಮಾಡಿ ಬೆಳ್ಳೂರು, ಬಿಂಡಿಗನವಿಲೆ, ಕಸಬಾ, ದೇವಲಾಪುರ ಮಾರ್ಗವಾಗಿ ಹತ್ತು ದಿನಗಳ ಕಾಲ ಪಾದಯಾತ್ರೆ ಕೈಗೊಂಡಿದ್ದು, ಪ್ರತಿನಿತ್ಯ 50ರಿಂದ 60 ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ, ಕೋಟೆಬೆಟ್ಟದ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಯಾತ್ರೆಯನ್ನ ಅಂತಿಮ ಗೊಳಿಸಲಾಗುತ್ತದೆ ಎಂದರು.
ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನ ಮಾಡಿಕೊಂಡು ಬಂದಿದೆ, ದೇಶದ ಜನರು ಕೂಡ ಕಾಂಗ್ರೆಸ್ ಆಡಳಿತ ರೂಪು ರೇಷೆಗಳನ್ನ ನೋಡಿದ್ದಾರೆ. ದೇಶದ ಅಭಿವೃದ್ಧಿ, ರಾಜ್ಯದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಬೇಕೆಂದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಸುರೇಶ್ ಕಂಠಿ ನಾಗಮಂಗಲ ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಎಸ್ ಟಿ ವರ್ಗದ ಅಧ್ಯಕ್ಷ ಶ್ರೀನಿವಾಸ್, ಗ್ರಾ.ಪಂ. ಸದಸ್ಯ ರಮೇಶ್, ಮುಖಂಡರಾದ ಕ್ರಾಂತಿಸಿಂಹ, ವಸಂತಮಣಿ, ಸಾವಿತ್ರಮ್ಮ, ಗೀತಾ ಹಿರೇಗೌಡ, ವೀಣಾ ಶಂಕರ್, ಮಂಜೇಶ್ ಇತರಿದ್ದರು.