ಸ್ವಾತಂತ್ರ್ಯ ಬಂದ ನಂತರದಲ್ಲಿ ಮಂಡ್ಯ ಜಿಲ್ಲೆಗೆ ಯಾವ ಸರ್ಕಾರ ನೀಡಿದಷ್ಟು ಅನುದಾನ, ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಈ ಹಿಂದೆ ಇದ್ದ ಸರ್ಕಾರ ತಾಲೂಕಿಗೆ ಏನು ನೀಡಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಮನೆ ಸದಸ್ಯರು ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಏಳು ತಿಂಗಳಾದರೂ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬಂದಿಲ್ಲ. ಆದರೆ ರಾಜ್ಯ ಸರ್ಕಾರ ರೈತರಿಗೆ ಹಣ ನೀಡಿದೆ. 1500 ಕೋಟಿ ಹಣವನ್ನು ರೈತರಿಗೆ ಪರಿಹಾರವಾಗಿ ನೀಡಿದೆ ಎಂದರು.
ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ, ಕೆಆರ್ ಎಸ್ ಉದ್ಯಾನವನ ನವೀಕರಣ, ಸಕ್ಕರೆ ಕಾರ್ಖಾನೆ ಆರಂಭ ಹೀಗೆ ಹತ್ತಾರು ಯೋಜನೆ ಕೊಟ್ಟ ಕಾಂಗ್ರೆಸ್ ಗೆ ಏನಾದರೂ ಕೊಡಬೇಕಲ್ಲ. ಜನತೆ ಪ್ರೀತಿ, ವಿಶ್ವಾಸದ ಜೊತೆಗೆ ಅಭ್ಯರ್ಥಿ ಗೆಲ್ಲಿಸಿದರೆ, ಅದೇ ನೀವು ಕೊಡುವ ದೊಡ್ಡ ಉಡುಗೊರೆ ಎಂದರು.
ಎದುರಾಳಿ ಅಭ್ಯರ್ಥಿ ಯಾರೇ ಆಗಲಿ. ಜಿಲ್ಲೆಯ ಸ್ವಾಭಿಮಾನ ಉಳಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗೋಣ. ಆಸೆ, ಆಮಿಷಗಳಿಗೆ ಬಲಿಯಾಗಬೇಡಿ. ನಮ್ಮ ಕಾರ್ಯಕರ್ತರು
ಮನೆಮನೆಗೆ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಾಲಮನ್ನಾ, ಎಂಎಸ್ ಪಿ ಜಾರಿ ಮಾಡುವುದಾಗಿ ಇಂಡಿಯಾ ಕೂಡ ಘೋಷಿಸಿದೆ. ರೈತರ ಕಲ್ಯಾಣಕ್ಕಾಗಿ ನಾನಾ ಯೋಜನೆಗಳನ್ನು ಘೋಷಿಸಿದೆ. ಅಧಿಕಾರಕ್ಕಾಗಿ ರಾಹುಲ್ ಗಾಂಧಿ ಹೋರಾಡುತ್ತಿಲ್ಲ. ಅವರಿಗೆ ಜನತೆ ಮುಖ್ಯ. ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದು ಕರೆಕೊಟ್ಟರು.
ನಿಮ್ಮ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರವೇ ಪರಿಹಾರ
ಎಲ್ಲವನ್ನೂ ಕೊಟ್ಟಿರುವ ಕಾಂಗ್ರೆಸ್ ಗೆ ಹಿನ್ನಡೆಯಾದರೆ ಸರ್ಕಾರದ ಮುಂದೆ ಹೋಗಿ ಕೇಳುವುದು ಹೇಗೆ?
ಇನ್ನೂ ನಾಲ್ಕು ವರ್ಷ ಇದೆ. ಜಿಲ್ಲೆಯ ಅಭಿವೃದ್ಧಿ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 30 ದಿನ ಶ್ರಮಪಟ್ಟು ಕೆಲಸ ಮಾಡಿ, ನಮ್ಮ ಕೈ ಬಿಡಬೇಡಿ ಎಂದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ರೈತ ಕುಟುಂಬದಿಂದ ಬಂದವರು.
ಸಾಮಾನ್ಯ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿದಾಗ ಯಾವುದೇ ಅಪಸ್ವರ ವ್ಯಕ್ತವಾಗಿಲ್ಲ. ಜನರ ನಡುವೆ ಇರುವ ಅವರನ್ನು ಬೆಂಬಲಿಸಿ ಎಂದು ಹೇಳಿದರು.
ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ನಿಮ್ಮೆಲ್ಲರ ದುಡಿಮೆ, ಹೋರಾಟದಿಂದ ಮಂಡ್ಯ ಜಿಲ್ಲೆಯ ಎಂಟರಲ್ಲಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದೀರಿ. ಎದುರಾಳಿ ಯಾರಾದರೂ ಅವಶ್ಯಕತೆ ಇಲ್ಲ. ವೈಯಕ್ತಿಕ ಟೀಕೆಗಳನ್ನು ಮರೆತು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದೆ. ಬಡವರ, ದೀನದಲಿತರ, ಹಿಂದುಳಿದ ವರ್ಗದವರಿಗಾಗಿ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ಕಡೆಗೆ ಎಲ್ಲಾ ಸರ್ಕಾರಗಳು ತಿರುಗಿ ನೋಡುವಂತಾಗಿದೆ. ಕರ್ನಾಟಕ ಬಿಟ್ಟರೆ ಭಾರತದ ಯಾವುದೇ ರಾಜ್ಯದಲ್ಲಿ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ನೀಡುತ್ತಿಲ್ಲ ಎಂದರು.
ಸಭೆಯಲ್ಲಿ ಶಾಸಕ ಗಣಿಗ ರವಿ ಕುಮಾರ್ ಗಣಿಗ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.