ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳಿಸಿದರೆ ನಮ್ಮ ರಾಜ್ಯ ಉನ್ನತ ಸ್ಥಾನಕ್ಕೆ ತಲುಪುತ್ತದೆ. ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಅವರು ತಿಳಿಸಿದರು.
ಮದ್ದೂರು ತಾಲೂಕು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೋವರ್ ಮತ್ತು ರೇಂಜರ್ ಚಟುವಟಿಕೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸದಾ ಜ್ಞಾನ ಗಳಿಸುವಲ್ಲಿ ನಿರತರಾಗಿರಬೇಕು. ಅರಿತವರು ಉನ್ನತ ಸ್ಥಾನ ಪಡೆಯಲು ಸಾಧ್ಯ. ಎಲ್ಲ ಮಕ್ಕಳು ಉತ್ತಮ ಫಲಿತಾಂಶಗಳಿಸುವ ಕಡೆ ಗಮನ ಹರಿಸಿ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತುಂಬಾ ಪರಿಶ್ರಮ ಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಅವರು ಉನ್ನತ ಶಿಕ್ಷಣ ಪಡೆಯಲು ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಇನ್ನಿತರೆ ಕಾರಣಗಳು ಅಡ್ಡಿ ಬರುತ್ತದೆ. ಸರ್ಕಾರ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಸದುಪಯೋಗಪಡಿಸಿಕೊಳ್ಳಿ. ಪೋಷಕರು ಸಹ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದರು.
ನಮ್ಮ ದೇಶ ಬಹುಜನ, ಸರ್ವ ಧರ್ಮ ಸಮಾಜ ಹೊಂದಿದೆ. ಜಾತ್ಯತೀತ ರಾಷ್ಟ್ರ ಮತ್ತು ಒಕ್ಕೂಟದ ವ್ಯವಸ್ಥೆಯಲ್ಲಿ ಇಡೀ ರಾಷ್ಟ್ರದ ಯಾವುದೇ ಭಾಗದಲ್ಲಿ ಜೀವಿಸುವ, ಉದ್ಯೋಗ ಮಾಡುವ, ಅಧಿಕಾರವನ್ನು ಹೊಂದಿದ್ದು ನಮ್ಮ ಜಲ, ನಮ್ಮ ನೆಲವನ್ನು ಮೊದಲು ಗೌರವಿಸಬೇಕು ಎಂದು ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಮು ಎಂ.ವೈ, ನಿವೃತ್ತ ಇಂಜಿನಿಯರ್ ಕೆ. ಟಿ ಜಗದಿಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಣ್ಣಯ್ಯ ತೈಲೂರು ಸೇರಿದಂತೆ ಇನ್ನಿತರರಿದ್ದರು.