ಮೈಸೂರು ಜಿಲ್ಲೆ ಹಾಗೂ ಪಕ್ಷದಲ್ಲಿ ಯತೀಂದ್ರ ಪ್ರಮುಖ ಲೀಡರ್. ಮಾಜಿ ಎಂಎಲ್ಎಗಳು ಕೆಲಸ ಮಾಡುವುದನ್ನು ತಪ್ಪು ಎನ್ನುವುದಕ್ಕೆ ಆಗುತ್ತಾ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಮಾಜಿ ಎಂಎಲ್ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ಅವರು ವರುಣದಲ್ಲಿ ಸ್ಪರ್ಧೆ ಮಾಡಿದ ಕಾರಣ ಅವರು ಸ್ಪರ್ಧಿಸಲು ಆಗಲಿಲ್ಲ ಎಂದರು.
ತಂದೆಯ ಬಳಿ ಯತೀಂದ್ರ ಆ ರೀತಿ ಮಾತನಾಡುವುದನ್ನು ಎಲ್ಲಿಯೂ ನಾನು ನೋಡಿಲ್ಲ. ರಾಜಕೀಯವಾಗಿ ಭಾಗಿಯಾಗುವುದು, ಸಾರ್ವಜನಿಕ ಸೇವೆಯಲ್ಲಿ ಇರುವುದು ಅಪರಾಧವಲ್ಲ. ವರುಣಾ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ಅದರಲ್ಲಿ ತಪ್ಪೇನಿದೆ. ನಮ್ಮ ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ ತಪ್ಪೇನು ಇದೆ. ನಮ್ಮಲ್ಲೂ ಕೆಲ ಕಡೆ ಪಿಡಿಒ ಸರಿ ಇಲ್ಲ, ಬೇರೆ ಹಾಕಿ ಎನ್ನುತ್ತಾರೆ. ಅದನ್ನು ನಾವು ತಪ್ಪು ಎನ್ನುವುದಕ್ಕೆ ಆಗುತ್ತದೆಯೇ?. ಸಲಹೆ ಕೊಡುವುದರಲ್ಲಿ ತಪ್ಪೇನಿಲ್ಲ. ವೈಎಸ್ಟಿ ಟ್ಯಾಕ್ಸ್ ಎಂದು ವಿರೋಧ ಪಕ್ಷದವರು ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ‘ಸೂಪರ್ ಸಿಎಂ’ ಎನ್ನುವ ಆರೋಪಕ್ಕೆ ತಿರುಗೇಟು ನೀಡಿ ಅವರು, ಮೈಸೂರು ಜಿಲ್ಲೆ ಕೀಳನಪುರ ಗ್ರಾಮದ ಜನಸಂಪರ್ಕ ಸಭೆಯಲ್ಲಿ ಡಾ.ಯತೀಂದ್ರ, ತಾನು ನೀಡಿದ ಪಟ್ಟಿಯನ್ನಷ್ಟೇ ಪರಿಗಣಿಸುವಂತೆ ಹೇಳಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ಉತ್ತರಿಸಿದ ಅವರು, ಇಂತವರು ಲಿಸ್ಟ್ ಆಗಬೇಕು ಎನ್ನುವ ನೇಚರ್ ಯತೀಂದ್ರದು ಅಲ್ಲ. ವಿಡಿಯೋದಲ್ಲಿ ಯಾವ ವಿಚಾರ ಹೇಳಿದರೋ ಏನೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಆ್ಯಂಡ್ ಫೇಸ್ಟ್ ಮಾಡಿದರೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಟ್ ಆ್ಯಂಡ್ ಫೇಸ್ಟ್ ಮಾಡುತ್ತಾರೆ. ಮಾತನಾಡಿದ ರೀತಿ ಬೇರೆ ಇರುತ್ತದೆ, ತೋರಿಸುವುದು ಬೇರೆ ಇರುತ್ತದೆ. ಯತೀಂದ್ರ ಒಳ್ಳೆಯ ವ್ಯಕ್ತಿ ಎಂದು ಹೇಳಿದರು.