ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ.ಚುನಾವಣೆಗೂ ಮುನ್ನ ಆಕಾಂಕ್ಷಿಗಳು ಕೊಟ್ಟ ಕೊಡುಗೆಗಳ ಹಿನ್ನಲೆಯಲ್ಲಿ ಮತ ಯಾರಿಗೆ ಹಾಕುತ್ತೀರಾ ಎಂಬ ಬಗ್ಗೆ ಗ್ರಾಮೀಣ ಪ್ರದೇಶದ ಹಿರಿಯರೊಬ್ಬರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯರನ್ನು, ಓ ದೊರೆ ವೋಟ್ ಯಾರಿಗೆ ಹಾಕಿಯಾ ಎನ್ನುತ್ತಾರೆ. ಅದಕ್ಕೆ ಹಿರಿಯ ವ್ಯಕ್ತಿ ಅಯ್ಯೋ…ಇದೇ ಉಭಯಸಂಕಟ ಬಂದಿರೋದು. ಈ ಕ್ಯಾನ್ ಕೊಟ್ಟೋನು ಉದಯ, ನೀರು ಕುಡಿವಾಗ ಅವನ ಗ್ಯಾನ ಬತ್ತದೆ…ರಗ್ಗು ಕೊಟ್ಟವ್ನೆ ಸ್ವಾಮಿ, ಮಲಕೋವಾಗ ಅವನ ಗ್ಯಾನ ಬತ್ತದೆ. ಡಿ.ಸಿ.ತಮ್ಮಣ್ಣ ಫಂಕ್ಷನ್ ನಲ್ಲಿ ಮಾಂಸ ತಿಂದ್ ಬಿಟ್ಟಿದೀನಿ, ಅವ್ನಗೆ ಹಾಕನೋ…ಗುರುಚರಣ್ ಮಾದಯ್ಯನ ಗಿರಿಗೆ ಕರ್ಕೊಂಡು ಹೋಗವ್ನೆ, ಅವ್ನಗೆ ಹಾಕೋನೋ…ಒಳ್ಳೆ ತಲೆಕೆಟ್ ಮೆಣಸಿಕ್ಕುಬುಟೈತೆ ಅನ್ನುತ್ತಾರೆ.
ಹಂಗಾರೆ ಏನ್ಮಾಡಿಯೇ ಅಂತ ವ್ಯಕ್ತಿಯೊಬ್ಬ ಪ್ರಶ್ನಿಸಿದಾಗ ಆ ಹಿರಿಯ ಮತದಾರ ‘ಯೋಚ್ನೆ ಮಾಡ್ಬೇಕು, ಇಲ್ಲಾ ಎಲ್ರಿಗೂ ಒತ್ಬಿಡ್ಬೇಕು, ಇಲ್ಲ ಎಲ್ರೂನು ಬಿಡ್ ಬಿಡ್ಬೇಕು ಎಂದು ಹಾಸ್ಯದ ಶೈಲಿಯಲ್ಲಿ ಆಡಿರುವ ಮಾತುಗಳು ಸಾಕಷ್ಟು ವೈರಲ್ ಆಗಿ ನಗು ಬರಿಸುವಂತಿವೆ.