ಹೆಚ್ಚು ಬಾಲ್ಯವಿವಾಹಗಳು ದಾಖಲಾಗುತ್ತಿರುವ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆಯು ಹೆಚ್ಚು ಅಪಖ್ಯಾತಿಗೆ ಒಳಗಾಗಿದ್ದು, ಇದನ್ನು ಹೋಗಲಾಡಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದು ಜಿ.ಪಂ.ಸಿಇಓ ಶಾಂತ ಎಲ್. ಹುಲ್ಮನಿ ಹೇಳಿದರು.
ಮಂಡ್ಯ ನಗರದ ನ್ಯಾಯಾಲಯದ ಆವರಣದಲ್ಲಿ ಬಾಲ್ಯವಿವಾಹ ಮುಕ್ತ ಭಾರತ, ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ ಕುರಿತು ಜಿಲ್ಲಾ ಮಟ್ಟದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಎರಡು ದಿನಗಳಿಂದ ಬಾಲಭವನದಲ್ಲಿ ಬಾಲಕಿಯರ ಜೊತೆ ಸಂವಾದ ಮಾಡಿದ ಸಂದರ್ಭದಲ್ಲಿ ಬಹಳಷ್ಟು ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಿವೆ, ಇಂತಹ ಪ್ರಕರಣಗಳನ್ನು ತಡೆಯಬೇಕಾದರೆ ಎಲ್ಲಾರು ನಮ್ಮ ಜೊತೆ ಕೈಜೋಡಿಸಬೇಕು. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹದ ಬಗ್ಗೆ ಜಾಗೃತರಾದರೆ, ಅಕ್ಕ ಪಕ್ಕದ ಎಲ್ಲಾ ವಿದ್ಯಮಾನಗಳನ್ನು ತಿಳಿದುಕೊಂಡು 1098 ಅಥವಾ 112 ನಂಬರ್ ಗೆ ಕೆರೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಾಲ್ಯ ವಿವಾಹದ ಬಗ್ಗೆ ಅರಿವು ಅಗತ್ಯ
ಬಾಲ್ಯ ವಿವಾಹದ ಪಿಡುಗು ಬಾಲ್ಯವನ್ನೇ ನಾಶ ಮಾಡುತ್ತದೆ, ಬಾಲ್ಯ ವಿವಾಹದ ಕುರಿತು ಅರಿವು ಇಲ್ಲದೆ ಇರುವುದು ಇದಕ್ಕೆಲ್ಲ ಕಾರಣವಾಗಿದೆ, ಬಾಲ್ಯ ವಿವಾಹದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿ ಕುಮಾರಿ ಹೇಳಿದರು.
ಬಾಲ್ಯವಿವಾಹ ಮುಕ್ತ ಭಾರತ, ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ ಕುರಿತು ಜಿಲ್ಲಾ ಮಟ್ಟದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ಮಾಡಿದ್ದೇವೆ. ಇದೇ ರೀತಿ ಬಾಲ್ಯ ವಿವಾಹ ಕುರಿತು ಜಾಥಾ ಕಾರ್ಯಕ್ರಮವನ್ನು ಕೈಗೊಂಡು ಅರಿವು ಮೂಡಿಸಿದರೆ, ಒಂದೇ ದಿನದಲ್ಲಿ ಹೆಚ್ಚು ಹೆಚ್ಚು ಜನಸಾಮಾನ್ಯರಿಗೆ ಅರಿವು ಮೂಡಿಸುವಂತಹ ಉತ್ತಮ ಕೆಲಸ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು, ಸಿಡಿಪಿಒ ಕುಮಾರಸ್ವಾಮಿ, ಮಕ್ಕಳ ಸಹಾಯವಾಣಿಯ ನಿರ್ದೇಶಕ ಮಿಕ್ಕೆರೆ ವೆಂಕಟೇಶ್, ಸದಸ್ಯರಾದ ರಾಜೇಂದ್ರ, ಮಹದೇವ, ರಶ್ಮಿ, ಪ್ರಭಾವತಿ, ಸ್ಮಿತಾ, ನಿಸರ್ಗ,ಪವಿತ್ರ, ಸುಷ್ಮಾ ಲಕ್ಷ್ಮೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.