ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಅವರುಗಳನ್ನು ಲಾಲನೆ -ಪಾಲನೆ ಮಾಡಿ ಭವ್ಯ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಲಯನ್ಸ್ ಜಿ ಈ ಟಿ ಕೋ -ಆರ್ಡಿನೆಟರ್ ಲ. ಹನುಮಂತಯ್ಯ ಹೇಳಿದರು
ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನುಮದಿನದ ಪ್ರಯುಕ್ತ, ಅಂತರ ರಾಷ್ಟ್ರೀಯ ಲಯನ್ಸ್, ಜಿಲ್ಲೆ -317-ಜಿ ಯ, ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್, ಬೆಳಕು ಲಯನ್ಸ್ ಕ್ಲಬ್, ಬಸರಾಳು ಲಯನ್ಸ್ ಕ್ಲಬ್ ಗಳ ವತಿಯಿಂದ, ಮಂಡ್ಯದ ಸ್ನೇಹಾಲಯ ವಿಶೇಷ ಮಕ್ಕಳ ಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದ “ಮಕ್ಕಳ ದಿನಾಚರಣೆ”ಯ ಪ್ರಯುಕ್ತ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ವಲಯಾಧ್ಯಕ್ಷ ಲಯನ್ ಜಿ. ಧನಂಜಯ ದರಸಗುಪ್ಪೆ ಮಾತನಾಡಿ, ನೆಹರು ಅವರ135 ನೇ ಜನುಮದಿನದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ನೆಹರು ಅವರಿಗೆ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ -ಅಕ್ಕರೆ, ಮಕ್ಕಳು ಸಹ ಅವರನ್ನು ಚಾಚಾ, ಚಾಚಾ ನೆಹರೂ ಎಂದು ಗೌರವಪೂರ್ವಕವಾಗಿ ಸಂಭೋಧಿಸುತ್ತಿದ್ದರು. ಹಾಗಾಗಿ, ನವೆಂಬರ್ 14ರ ನೆಹರೂ ಅವರ ಜನುಮದಿನವನ್ನು “ಮಕ್ಕಳ ದಿನಾಚರಣೆ”ಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಭಾರತದ ಪ್ರಥಮ ಪ್ರಧಾನಿಯಾದ ನೆಹರೂರವರು ದೂರದೃಷ್ಟಿಯಿಂದ ಜಾರಿಗೆ ತಂದ ಹಲವಾರು ಜನಪರ ಯೋಜನೆ ಹಾಗೂ ಆಲೋಚನೆಯ ಪ್ರಗತಿಪರ ಅಡಿಪಾಯದ ಫಲವಾಗಿ, ಇಂದು ಭಾರತ ಅಭಿವೃದ್ಧಿ ಹೊಂದುತ್ತಾ, ವಿಶ್ವದಲ್ಲಿಯೇ ಎಲ್ಲರೂ ಭಾರತದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದರು.
ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೇರಿದ, ನೆಹರೂರವರು ಧೃತಿಗೆಡದೆ, ದೇಶದ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಧಾರಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಒಬ್ಬ ರಾಜಕಾರಣಿಯಾಗಲ್ಲದೇ, ಉತ್ತಮ ಲೇಖಕರಾಗಿಯೂ ಇದ್ದರು ಎಂಬುದನ್ನು ಅವರ ಕೃತಿ ಗಳಿಂದ ನೋಡಬಹುದು ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಗಳಾದ ಮಂಡ್ಯ ನಾಲ್ವಡಿ ಅಧ್ಯಕ್ಷ ಲ. ಕೆ. ಶಿವಲಿಂಗಯ್ಯ, ಬಸರಾಳು ಲ ಕ್ಲಬ್ ಅಧ್ಯಕ್ಷ ಲ.ಪ್ರದೀಪ್, ಬೆಳಕು ಲಯನ್ಸ್ ಕ್ಲಬ್ ಅಧ್ಯಕ್ಷ, ಲ.ಎಂ. ಸಿ. ಭಾಸ್ಕರ್, ಲಯನ್ಸ್ ಜಿಲ್ಲಾಧ್ಯಕ್ಷ ಲ. ಶೇಖರ್ ಹೊಸಹಳ್ಳಿ ,ಸ್ನೇಹಾಲಯ ಮುಖ್ಯಸ್ಥರಾದ ಸಿಸ್ಟೆರ್ ಮೇರಿಯಮ್ಮ, ಹಾಗೂ ಸ್ನೇಹಾಲಯದ ವಿಶೇಷ ಮಕ್ಕಳು ಉಪಸ್ಥಿತರಿದ್ದರು.