ಮರದ ಕೊಂಬೆ ಮುರಿದು ಬಿದ್ದು ಗುತ್ತಿಗೆ ಪೌರ ಕಾರ್ಮಿಕನೊಬ್ಬ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯನಗರದ ತಾವರಗೆರೆ ಉದ್ಯಾನವನದ ಬಳಿ ಕಳೆದ ರಾತ್ರಿ 9 ಗಂಟೆಯ ಸಮಯದಲ್ಲಿ ನಡೆದಿದೆ.
ಮಂಡ್ಯದ ನೆಹರುನಗರದ ಬಳಿಯ ಪೌರ ಕಾರ್ಮಿಕರ ಕಾಲೋನಿಯ ನಿವಾಸಿ ಉದಯ್ (31) ಸಾವಿಗೀಡಾದ ಗುತ್ತಿಗೆ ಪೌರ ಕಾರ್ಮಿಕ.
ಈತ ರಾತ್ರಿ 9ಗಂಟೆ ಸಮಯದಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ನಗರದ ತಾವರೆಗೆರೆಯ ಚಲುವಯ್ಯ ಉದ್ಯಾನವನದ ಬಳಿ ಬೈಕ್ ನಲ್ಲಿ ಸಾಗುವಾಗ ಒಣಗಿ ನಿಂತಿದ್ದ ಮರ ಉರುಳಿ ಸಾವನ್ನಪ್ಪಿದ್ದಾನೆ. ಜತೆಯಲ್ಲಿದ್ದ ಹೆಂಡತಿ ಮಕ್ಕಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಆತನ ಪತ್ನಿ ಧನಲಕ್ಷ್ಮಿ, 6 ವರ್ಷದ ಒಂದು ಗಂಡು ಮಗು, 3 ವರ್ಷದ ಒಂದು ಹೆಣ್ಣು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮರ ಒಣಗಿದ್ದು ಮರವನ್ನು ತೆರವುಗೊಳಿಸುವಂತೆ ಮಂಡ್ಯ ನಗರಸಭೆ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿದ್ದಾಗಿಯೂ ಅರಣ್ಯ ಇಲಾಖೆ ನಿರ್ಲಕ್ಷದಿಂದ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.
20 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಮೃತ ಪೌರಕಾರ್ಮಿಕನ ಕುಟುಂಬಕ್ಕೆ ಕನಿಷ್ಟ 20 ಲಕ್ಷ ಪರಿಹಾರ ನೀಡುವಂತೆ ಹಾಗೂ ಮೃತ ಕುಟುಂಬಕ್ಕೆ ಅನುಕಂಪದ ನೌಕರಿ ನೀಡುವಂತೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಪ್ರಧಾನ ಕಾರ್ಯದರ್ಶಿ ದಿನೇಶ್, ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಸುಬ್ರಮಣ್ಯ ಆಗ್ರಹಿಸಿದ್ದಾರೆ.
ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಅಲ್ಲಿಗೆ ಮಂಡ್ಯ ನಗರದ ನೂರಾರು ಪೌರಕಾರ್ಮಿಕರು ಆಗಮಿಸಿ, ಮೃತನ ಕುಟುಂಬಕ್ಕೆ ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಮಂಜು, ಆಯುಕ್ತ ಮಂಜುನಾಥ್, ನಗರಸಭಾ ಸದಸ್ಯ ಶ್ರೀಧರ್ ಆಗಮಿಸಿ ವಿವಿಧ ಸಂಘಟನೆಗಳ ಅಹವಾಲುಗಳನ್ನು ಕೇಳಿ, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.