ವಿದ್ಯಾರ್ಥಿಗಳ ಉತ್ತಮ ಆರೋಗ್ಯಕ್ಕೆ ನೀರು ಬಹಳ ಮುಖ್ಯ ಎಂಬ ಸದುದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟ ಮಲ್ಲಿಕಾರ್ಜುನ್(ಫೈಟರ್ ರವಿ) ಅವರ ಕಾರ್ಯ ಶ್ಲಾಘನೀಯ ಎಂದು ಕುವೆಂಪು ಶಾಲೆಯ ಅಧ್ಯಕ್ಷ ಸಿ.ಎನ್. ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದರು.
ನಾಗಮಂಗಲ ಪಟ್ಟಣದ ಶನಿವಾರ ಕುವೆಂಪು ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುವೆಂಪು ಸ್ಮಾರಕ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ (ಫೈಟರ್ ರವಿ) ಮತ್ತು ನನ್ನ ಸ್ನೇಹ ಹನ್ನೆರಡು ವರ್ಷಗಳದ್ದು.ನಾಗಮಂಗಲ ತಾಲ್ಲೂಕಿನ ಮಲ್ಲನಕೊಪ್ಪಲು ಗ್ರಾಮದ ರವಿಯವರು ಎಡಗೈನಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು ಎಂಬ ಗಾದೆ ಮಾತಿನಂತೆ ಸಹಾಯ ಮಾಡುತ್ತಿರುವ ವ್ಯಕ್ತಿ. ತನ್ನಲ್ಲಿರುವ ಹಣವನ್ನ ತಾಲೂಕಿನ ಜನರ ಸಮಸ್ಯೆಗೆ ಬಳಸಿ ಬಡವರ ಕೈ ಹಿಡಿಯುತ್ತಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಶಿಕ್ಷಣ, ಸಮಾಜದ ಕೆಲಸ, ಬಡವರಿಗೆ ಸಹಾಯ ಮಾಡಿಕೊಂಡು ಬಂದಿರುವ ಸಾಮಾಜಿಕ ಚಿಂತನೆಯುಳ್ಳ ರವಿಯವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಲಭಿಸಲಿ ಎಂದು ಶುಭ ಹಾರೈಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಜೆ.ಕುಮಾರ್ ಮಾತನಾಡಿ, ಇಡೀ ತಾಲೂಕಿನಾದ್ಯಂತ ಹಲವಾರು ಶಾಲೆ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿರುವ ಫೈಟರ್ ರವಿಯವರು ಸಾಮಾಜಿಕ ಸೇವಾ ಕಾರ್ಯಗಳು ತಾಲೂಕಿನಾದ್ಯಂತ ಮತ್ತಷ್ಟು ಮುಂದುವರಿಯಲಿ. ಆ ದೇವರು ಇನ್ನಷ್ಟು ಅವಕಾಶವನ್ನ ಅವರಿಗೆ ಕಲ್ಪಿಸಿಕೊಡಲಿ ಎಂದು ಹೇಳಿದರು.
ಫೈಟರ್ ರವಿ ಮಾತನಾಡಿ,ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದೇನೆ.ವಿದ್ಯಾರ್ಥಿಗಳು ಶುದ್ಧ ನೀರನ್ನು ಸೇವಿಸಿ ತಮ್ಮ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಸಲಹೆ ನೀಡಿದರು. ಈಗ ಶಾಲೆಗೆ ಲ್ಯಾಬ್ ಹಾಗೂ ಬೋರ್ವೆಲ್ ಮೋಟಾರ್ ವ್ಯವಸ್ಥೆ ಮಾಡಿಸಿ ಎಂದು ಕೇಳಿದ್ದಾರೆ. ಅದನ್ನ ಶೀಘ್ರ ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಶಾಲೆಗೆ ಶುದ್ಧ ನೀರಿನ ಘಟಕ ಕಲ್ಪಿಸಿ ಕೊಟ್ಟ ರವಿಯವರಿಗೆ ಶಾಲೆ ಹಾಗೂ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಪೇಟ ತೊಡಿಸಿ,ಹಾರ ಹಾಕಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಡಿ.ತಿಮ್ಮಯ್ಯ, ಶಾಲೆಯ ಸಂಸ್ಥಾಪಕ, ಮುಖ್ಯಶಿಕ್ಷಕ ಬೊಮ್ಮೇಗೌಡ , ವಕೀಲ ಕೆಂಪೇಗೌಡ,ಪತ್ರಕರ್ತ ಜಯರಾಮ್, ಕೃಷ್ಣಮೂರ್ತಿ, ತಮ್ಮಣ್ಣಗೌಡ, ನಿಂಗರಾಜು, ಶಂಕರ್, ರಾಮಸ್ವಾಮಿಗೌಡ,ಯುವ ಮುಖಂಡ ಲಿಖಿತ್ ಸೇರಿದಂತೆ ಶಾಲೆಯ ಶಿಕ್ಷಕರು ವೃಂದದವರು ಉಪಸ್ಥಿತರಿದ್ದರು.