ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆ, ಕಾಂಗ್ರೆಸ್ ನಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಡಿ.25ರ ಭಾನುವಾರ ಮಹತ್ವದ ಸಭೆ ನಡೆಯಲಿದೆ.
ಮಂಡ್ಯ ನಗರದ ಕಲ್ಲಳ್ಳಿಯ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ನಾಗಸಿರಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಕಾಂಗ್ರೆಸ್ ಬಿ ಫಾರಂ ಆಕಾಂಕ್ಷಿತರ ಸಭೆ ನಡೆಯಲಿದೆ.
ಕಾಂಗ್ರೆಸ್ ಚುನಾವಣಾ ಸಮಿತಿಯ ಮಂಡ್ಯ ಜಿಲ್ಲಾ ಉಸ್ತುವಾರಿಗಳಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
ಡಿಸೆಂಬರ್ 25ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಯಲಿದೆ. 10 ಗಂಟೆಯ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಬಿ ಫಾರಂ ಬಯಸಿರುವ ಆಕಾಂಕ್ಷಿಗಳಿಂದ ಅವರ ಅಭಿಪ್ರಾಯ ಪಡೆಯಲಾಗುತ್ತದೆ. ಹಾಗೆಯೇ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಪಡೆದು, ಪ್ರತಿ ತಾಲೂಕಿನಿಂದ ಮೂವರು ಆಕಾಂಕ್ಷಿಗಳನ್ನು ಅಂತಿಮ ಮಾಡಿ ಪಟ್ಟಿ ಮಾಡಲಾಗುತ್ತದೆ.
ಕಾಂಗ್ರೆಸ್ ಚುನಾವಣಾ ಸಮಿತಿಯ ಉಸ್ತುವಾರಿಗಳು ಪ್ರತಿ ತಾಲೂಕಿನಿಂದ ಆಕಾಂಕ್ಷಿಗಳಾಗಿರುವ ಮೂವರ ಪಟ್ಟಿಯನ್ನು ತಯಾರಿಸಿ ಕೆಪಿಸಿಸಿ ಅಧ್ಯಕ್ಷರಿಗೆ ನೀಡಲಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅತೀ ಹೆಚ್ಚು ಅಂದರೆ 16 ಮಂದಿ ಆಕಾಂಕ್ಷಿಗಳು ಕಾಂಗ್ರೆಸ್ ಬಿ ಫಾರಂಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಆತ್ಮಾನಂದ,ಗಣಿಗ ರವಿಕುಮಾರ್, ಅಂಜನಾ ಶ್ರೀಕಾಂತ್, ಬಿ.ಸಿ. ಶಿವಾನಂದ, ಅಸದುಲ್ಲ ಖಾನ್, ಶಿವಲಿಂಗೇಗೌಡ, ಡಾ. ಕೃಷ್ಣ,ಅಮರಾವತಿ ಚಂದ್ರಶೇಖರ್, ಮಾಜಿ ಶಾಸಕ ಎಚ್. ಬಿ. ರಾಮು, ಕೀಲಾರ ಕೆ.ಕೆ. ರಾಧಾಕೃಷ್ಣ,ಹನಕೆರೆ ಶಿವರಾಂ, ಹಾಲಹಳ್ಳಿ ಅಶೋಕ್, ಉಮ್ಮಡಹಳ್ಳಿ ಶಿವಕುಮಾರ್, ಸಿದ್ದಾರೂಢ ಸತೀಶ್ ಗೌಡ, ಎಂ.ಎಸ್. ಚಿದಂಬರ್, ಹಾಲಹಳ್ಳಿ ರಾಮಲಿಂಗಯ್ಯ ಬಿ. ಫಾರಂ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಗುರುಚರಣ್,ಮಾಜಿ ಎಂ ಎಲ್ ಸಿ ಬಿ.ರಾಮಕೃಷ್ಣ, ಶಂಕರೇಗೌಡ ಅರ್ಜಿ ಸಲ್ಲಿಸಿದ್ದಾರೆ. ಕೆ.ಆರ್. ಪೇಟೆಯಿಂದ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ವಿಜಯ್ ರಾಮೇಗೌಡ, ಎಂ.ಬಿ. ಕೃಷ್ಣಮೂರ್ತಿ, ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್ ಆಕಾಂಕ್ಷಿತರಾಗಿದ್ದಾರೆ.
ಮೇಲುಕೋಟೆಯಿಂದ ಡಾ. ರವೀಂದ್ರ, ತ್ಯಾಗರಾಜ್, ಆನಂದ್ ಕುಮಾರ್, ಶ್ರೀರಂಗಪಟ್ಟಣದಿಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಪುಟ್ಟೇಗೌಡ,ಪಾಲಹಳ್ಳಿ ಚಂದ್ರಶೇಖರ್, ಮಳವಳ್ಳಿಯಿಂದ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಜಮ್ಮ ಹಾಗೂ ಡಾ.ಮೂರ್ತಿ ಅರ್ಜಿ ಸಲ್ಲಿಸಿದ್ದಾರೆ.
ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಒಬ್ಬರೇ ಕಾಂಗ್ರೆಸ್ ಬಿ.ಫಾರಂ ಆಕಾಂಕ್ಷಿ.