ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹಾರಿಸಿರುವ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದು ನಿಂದಿಸಿ, ಅವಮಾನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ದೂರು ನೀಡಿದರು.
ನಮ್ಮ ದೇಶದ ರಾಷ್ಟ್ರಧ್ವಜ ನಮಗೆ ಗೌರವದ ಸಂಕೇತ.ಪಕ್ಷ,ನಾಯಕನಿಗಿಂತ ನಮಗೆ ರಾಷ್ಟರ ಧ್ವಜವೇ ಮುಖ್ಯ. ನಮ್ಮ ರಾಷ್ಟ್ರಧ್ವಜವನ್ನು ಬಿಜೆಪಿ ನಾಯಕ ಸಿ.ಟಿ ರವಿ ಅವರು ತಾಲಿಬಾನ್ ಧ್ವಜ ಎಂದು ನಿಂದನೆ ಮಾಡಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ.ಇವರ ವಿರುದ್ಧ ಸೆಕ್ಷನ್ 51A(a) ಅನ್ವಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದರಿಂದ ಭಾರತದ ಪ್ರಜೆಯಾಗಿ ದೂರು ಸಲ್ಲಿಸಿದ್ದೇನೆ. ಪೊಲೀಸರು ಸಿ.ಟಿ.ರವಿ ಮೇಲೆ ಸೂಕ್ತ ಕ್ರಮ ವಹಿಸಲು ಮುಂದಾಗಬೇಕು. ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜ ಎಂದಿರುವ ಸಿ.ಟಿ ರವಿಗೆ ಬುದ್ಧಿ ಭ್ರಮಣೆಯಾಗಿದೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ.ಕಾಂಗ್ರೆಸ್ ನಾಯಕರು ಗುಂಡಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ, ಹೋರಾಟದಲ್ಲಿ ಎಂದಿಗೂ ಭಾಗಿಯಾಗದ ಇವರು ಬ್ರಿಟಿಷರಿಗೆ ಹೆದರಿ ವೇತನ ಪಡೆದಿದ್ದಾರೆ.ಹೀಗಿದ್ದರೂ ಸುಮ್ಮನೆ ದೇಶ ಭಕ್ತರು ಎಂದು ಬೊಬ್ಬೆ ಹಾಕುತ್ತಾರೆ ಎಂದು ಟೀಕಿಸಿದರು.
ದೇಶವನ್ನು ಶೂನ್ಯದ ಪರಿಸ್ಥಿತಿಯಿಂದ ಅಭಿವೃದ್ಧಿ ಪಥದತ್ತ ಕಾಂಗ್ರೆಸ್ ತೆಗೆದುಕೊಂಡು ಹೋಗಿದೆ, ನೀರಾವರಿ, ಸಾರಿಗೆ, ಸೇರಿದಂತೆ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದೆ. ಬಡ ಜನರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಸಿ.ಟಿ.ರವಿನೇ ಸೀಡ್ಲೆಸ್
ಸಿ.ಟಿ.ರವಿ ನಿಮ್ಮನ್ನೇ ಸೀಡ್ಲೆಸ್ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಸ್ವಾಮಿ, ಬಿಜೆಪಿ ಪಕ್ಷವನ್ನು 2008 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮೊದಲು ಬೀಜ ಬಿತ್ತಿದ್ದೆ ಈ ನರೇಂದ್ರಸ್ವಾಮಿ ಎಂಬುದನ್ನು ಸಿ.ಟಿ.ರವಿ ಮನವರಿಕೆ ಮಾಡಿಕೊಳ್ಳಲಿ.ಅಂದು ನಾನು ಬೀಜ ಹಾಕದಿದ್ದರೆ ಬಿಜೆಪಿ ಪಕ್ಷ ಹುಟ್ಟುತ್ತಲೇ ಇರಲಿಲ್ಲ. ಈಗ ಯಾರು ಸೀಡ್ಲೆಸ್ ಅಂತ ಗೊತ್ತಾಯಿತಲ್ಲ ಎಂದು ವ್ಯಂಗ್ಯವಾಡಿದರು.
ಸಚಿವ ಸ್ಥಾನ ಪಡೆಯಲು ಈ ರೀತಿ ಮಾತನಾಡುತ್ತಿದ್ದೀರೆಂದು ಸಿ.ಟಿ.ರವಿ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎಂದಿಗೂ ಬಹುಮತದಿಂದ ಬಿಜೆಪಿ ಸರ್ಕಾರ ರಚಿಸಿಲ್ಲ. ಎರಡು ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂಬುದನ್ನು ಅರಿಯಬೇಕು. ನಾನು ಸಚಿವರಾಗುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ.ನಾನು ಸಚಿವ ಸ್ಥಾನಕ್ಕಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಜೊತೆ ಗುದ್ದಾಡುತ್ತೇನೆ. ಸಚಿವನಾಗಲು ನಿಮ್ಮನ್ನು ಟೀಕಿಸುವ ಅಗತ್ಯ ಇಲ್ಲ ಎಂದರು.