ಗ್ರಾಮ ಪಂಚಾಯಿತಿ ಪ್ರಥಮ ಪ್ರಜೆಯಾದ ಗ್ರಾ.ಪಂ. ಅಧ್ಯಕ್ಷರ ಗ್ರಾಮದಲ್ಲಿ ವಾಸವಿಲ್ಲದೆ, ಬೇರೆಡೆ ಇರುವುದರಿಂದ ತಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲವಾಗಿದ್ದಾರೆ ಎಂದು ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ನಿವೇಶನ ರಹಿತ ಮಹಿಳೆಯರು ಮಂಡ್ಯ ತಾ.ಪಂ. ಇಓ ಎಂ.ಎಸ್.ವೀಣಾ ಅವರಿಗೆ ಸೋಮವಾರ ದೂರು ನೀಡಿದರು.
ಹಳೇ ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾನಸ ಅವರು, ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿಲ್ಲ. ಗ್ರಾಪಂ ಸದಸ್ಯರಾದರೂ ಗ್ರಾಮದಲ್ಲಿ ವಾಸವಿಲ್ಲದ ಕಾರಣ, ತಮಗೆ ತೀವ್ರ ಅನಾನುಕೂಲವಾಗಿದೆ, ಈ ಬಗ್ಗೆ ಕ್ರಮವಹಿಸಬೇಕೆಂದು ಅವರು ಆಗ್ರಹಿಸಿದರು.
ಗ್ರಾ.ಪಂ.ಅದ್ಯಕ್ಷರು ಗ್ರಾಮದಲ್ಲಿ ವಾಸವಿದ್ದು ಜನರ ಅಹವಾಲು ಕೇಳಬೇಕು, ಪ್ರಸ್ತುತ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿ, ಈಗಾಗಲೇ ತಮ್ಮ ಅತ್ತೆ ಹೆಸರಿನಲ್ಲಿ ಒಂದು ನಿವೇಶನ ಹಾಗೂ ಮನೆ ಪಡೆದು ಅಕ್ರಮವೆಸಗಿದ್ದಾರೆ. ಈ ಕುರಿತು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಂಗನವಾಡಿ ಸಹಾಯಕಿ ಬೋರಮ್ಮ ಎಂಬುವವರ ಸಾಕು ಮಗನ ಹೆಂಡತಿಯಾದ ಅಧ್ಯಕ್ಷೆ ಮಾನಸ ಅವರು ಸರ್ಕಾರಿ ಸವಲತ್ತು ಕಬಳಿಸುವ ದುರಾಲೋಚನೆಯಿಂದ 2 ಪಡಿತರ ಚೀಟಿ ಪಡೆದಿದ್ದಾರೆ, ಅಲ್ಲದೇ ಗೃಹಲಕ್ಷ್ಮಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಈ ಮೂಲಕ ನಿವೇಶನ ಮುಂತಾದ ಸವಲತ್ತುಗಳನ್ನು ಅಕ್ರಮವಾಗಿ ಪಡೆಯುತ್ತಿದ್ದು, ಅವರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮಾನಸ ಅವರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವಾಗಲ್ಲೂ ತಮ್ಮ ಅತ್ತೆ, ಪತಿಯ ಆಸ್ತಿ, ಆದಾಯಗಳ ಮಾಹಿತಿಯನ್ನ ಮರೆ ಮಾಚಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಓ ಎಂ.ಎಸ್.ವೀಣಾ ಅವರು, ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿವೇಶನ ರಹಿತರ ಮಹಿಳೆಯರಾದ ದೇವಮ್ಮ, ಮಂಗಳ, ವಿಜಯ, ಯೇಸುದಾಸ್, ಸರೋಜಮ್ಮ ಮತ್ತಿತರರಿದ್ದರು.