ಮನೆ ಮುಂದಿನ ಮೋರಿ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮೋರೆ ಹೋಗಿ ನ್ಯಾಯ ಪಡೆಯುವಲ್ಲಿ ಸಾಪ್ಟ್’ವೇರ್ ಇಂಜಿನಿಯರ್’ರೊಬ್ಬರು ಸಫಲರಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಸಾಪ್ಟ್’ವೇರ್ ಇಂಜಿನಿಯರ್ ಬಿ.ಎಸ್.ಚಂದ್ರಶೇಖರ್ ಎಂಬುವವರು ಸತತ 4 ವರ್ಷದಿಂದ ಹೋರಾಡಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೂದನೂರು ಗ್ರಾಪಂ ಆಡಳಿತ ಮಂಡಳಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗದ ವಿರುದ್ದ ಹೋರಾಟ ನಡೆಸಿದ್ದಕ್ಕಾಗಿ, ನಮ್ಮ ಮನೆ ಮುಂದೆ ಉದ್ದೇಶ ಪೂರ್ವಕವಾಗಿಯೇ ಚರಂಡಿ ನಿರ್ಮಾಣ ಕಾಮಗಾರಿ ನಡೆಸಿರಲಿಲ್ಲ, ಇದರಿಂದಾಗಿ ಆನ್ ಲೈನ್ ಮೂಲಕ ಎಲ್ಲಾ ದಾಖಲೆಗಳನ್ನು ನೀಡಿ, ಪ್ರಧಾನಿಯವರಿಗೆ ದೂರು ನೀಡಿದ್ದೆ, ಇದನ್ನು ಪರಿಶೀಲಿದ ಅವರು ಚಂರಡಿ ಕಾಮಗಾರಿ ನಡೆಸುವಂತೆ ಆದೇಶ ನೀಡಿದ್ದಾರೆ, ಇದರಿಂದಾಗಿ ಗ್ರಾಮ ಪಂಚಾಯಿತಿಯವರು ಕಾಮಗಾರಿ ಅರಂಭಿಸಿದ್ದಾರೆ ಎಂದು ವಿವರಿಸಿದರು.
ಈ ಕಾಮಗಾರಿ ಮಾಡದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ ಅವರಿಗೆ ₹ 10 ಸಾವಿರ ದಂಡ ವಿಧಿಸಲಾಗಿತ್ತಾದರೂ, ಕಾಮಗಾರಿ ನಡೆಸದೆ ಮತ್ತೇ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪಿಡಿಒ ಮೇಲ್ಮನವಿ ಸಲ್ಲಿಸಿದ್ದರು, ಇದರ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಹೋರಾಟ ಮುಂದುವರಿಸಿರುವುದಾಗಿ ಚಂದ್ರಶೇಖರ್ ತಿಳಿಸಿದರು.
ಗ್ರಾಮ ಪಂಚಾಯತಿ ಅವ್ಯವಹಾರದ ವಿರುದ್ದ ದನಿ ಎತ್ತಿದ್ದಕ್ಕೆ ತನಗೆ ತೊಂದರೆ ನೀಡಿರುವ ಗ್ರಾಪಂ ಆಡಳಿತ ಸಾಮಾನ್ಯ ಬಡ ಜನರಿಗೆ ಹೇಗೆ ಸ್ಪಂದಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.