ನಾಳೆ ನವೆಂಬರ್ 1ರಂದು ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯ ಸರಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವಂತೆ ತಾವುಗಳು ಆದೇಶ ನೀಡಬೇಕೆಂದು ಆಗ್ರಹಿಸಿ ಕರುನಾಡ ಸೇವಕರು ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದ್ದ ಈ ಹಿಂದಿನ ಬಿಜೆಪಿ ಸರಕಾರ ಕನ್ನಡ ಧ್ವಜ ಹಾರಿಸಲು ನಿರಾಕರಿಸಿ ತಾನು ಕನ್ನಡ ಕನ್ನಡಿಗ ಕರ್ನಾಟಕದ ಹಿತಾಸಕ್ತಿಗಳ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ, ಈಗಿನ ಕಾಂಗ್ರೆಸ್ ಸರಕಾರವೂ ಸಹ ಕನ್ನಡ ಧ್ವಜಕ್ಕೆ ಒಕ್ಕೂಟ ಸರಕಾರ ಮಾನ್ಯತೆ ನೀಡಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕನ್ನಡ ಧ್ವಜ ಹಾರಿಸಲು ನಿರಾಕರಣೆ ಮಾಡಿರುವುದು ಸರಿಯಾದುದಲ್ಲ. ಆದ್ದರಿಂದ ಕನ್ನಡ ಧ್ವಜ ಬಳಕೆ ಅನುಮತಿ ನೀಡಬೇಕೆಂದು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಸಿ ೫೦ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕನ್ನಡನಾಡು ಎಂದು ಮರುನಾಮಕರಣಗೊಳಿಸಬೇಕು. ಭಾಷವಾರು ಆಧಾರದಲ್ಲಿ ರಾಜ್ಯಗಳನ್ನು ರಚಿಸಲಾಗಿದ್ದು ಅವುಗಳ ಹೆಸರು ಸಹ ಭಾಷವಾರು ಆಧಾರದಲ್ಲೆ ಧ್ವನಿಸುವುದು ಉಚಿತವಾಗಿದೆ. ಇದಕ್ಕೆ ಉದಾಹರಣೆಯಾಗಿ ತಮಿಳುನಾಡನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕನ್ನಡನಾಡು ಎಂದು ಮರುನಾಮಕರಣಗೊಳಿಸುವಂತೆ ಆಗ್ರಹಿಸಿದ್ದಾರೆ.