ಮಂಡ್ಯ ತಾಲ್ಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಭಾಗವಹಿಸಿದ್ದ ಕಾರ್ಯಕ್ರಮ ದಲ್ಲಿ ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಬಿ.ಗೌಡಗೆರೆ ಗ್ರಾಮದಲ್ಲಿ ಇಂದು ಮಹದೇಶ್ವರ ದೇವಾಲಯದ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ಮತ್ತಿತರ ಪಕ್ಷಗಳ ನಾಯಕರನ್ನು ದೇವಸ್ಥಾನದ ವೇದಿಕೆಯ ಮೇಲೆ ಕರೆತರದೆ ಕೆಳಗೆ ಸನ್ಮಾನಿಸಲಾಗಿತ್ತು. ಆದರೆ ಸಂಸದೆ ಸುಮಲತಾ ಅಂಬರೀಷ್ ಅವರನ್ನು ವೇದಿಕೆಗೆ ಕರೆತಂದು ಸನ್ಮಾನಿಸಲು ಮುಂದಾದ ಸಂದರ್ಭದಲ್ಲಿ ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು ಕೈಗೆ ಸಿಕ್ಕ ಚೇರ್ ಗಳನ್ನು ಎತ್ತಿ ಬಿಸಾಡಲು ಆರಂಭಿಸಿದರು. ಆಗ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಬಡಿದಾಟ ಆರಂಭಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದು ದೇವಾಲಯ ಉದ್ಘಾಟನಾ ಕಾರ್ಯಕ್ರಮ ಇದರಲ್ಲಿ ರಾಜಕೀಯ ಮಾಡ್ಬೇಡಿ ಎಂದು ಪರಸ್ಪರ ಬೈದಾಡಿ ಕೊಂಡರು. ಅಲ್ಲದೆ ಗ್ರಾಮದಲ್ಲಿ ಬರಿ ಕಾಂಗ್ರೆಸ್ ನಾಯಕರ ಹಾಗೂ ಸುಮಲತಾರ ಫೋಟೊ ಹಾಕಿದ್ದೀರ ಎಂದು ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಗೊಂಡು ಫ್ಲೆಕ್ಸ್ ಗಳನ್ನು ಹರಿದು ಹಾಕಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದ ಹಿನ್ನಲೆಯಲ್ಲಿ ವೇದಿಕೆಯಿಂದ ಕೆಳಗಿಳಿದ ಸುಮಲತಾ ಅಂಬರೀಶ್ ವೇದಿಕೆಯಿಂದ ಇಳಿದು ಕಾರಿನಲ್ಲಿ ಕುಳಿತರು.
ಸಂಸದೆ ಸುಮಲತಾ ಅಂಬರೀಶ್ ಮತ್ತು ಪೊಲೀಸರ ಮಧ್ಯೆ ಪ್ರವೇಶದಿಂದ ಗಲಾಟೆ ಶಮನವಾಯಿತು. ನಂತರ ಗ್ರಾಮಸ್ಥರು ಸುಮಲತಾರನ್ನ ಸಮಾಧಾನಗೊಳಿಸಿ ಮತ್ತೆ ವೇದಿಕೆಗೆ ಕರೆದುಕೊಂಡು ಹೋಗಿ ಸನ್ಮಾನಿಸಿದರು.