ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯು ನಡೆಸುತ್ತಿರುವ 5ನೇ ದಿನ ಸರದಿ ಉಪವಾಸ ಉಪವಾಸ ಸತ್ಯಾಗ್ರಹ ಬುಧವಾರವು ಮುಂದುವರಿಯಿತು.
ಕನ್ನಡ ಸೇನೆಯ ಮಹಾಂತಪ್ಪ, ಎಂ ಎಸ್ ಮಂಜುನಾಥ್ ಬೆಟ್ಟಹಳ್ಳಿ, ಮಹಾದೇವಸ್ವಾಮಿ ರಾಮಂದೂರು, ಮಂಡ್ಯದ ಹೊಸಹಳ್ಳಿಯ ಶಿವು, ಗುತ್ತಲು ಬಡಾವಣೆಯ ಜಿ ಎಂ ಚಂದ್ರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಲ್ಲಿ ಹೋರಾಟ ಬೆಂಬಲಿಸಿದರು.
ಕೃಷ್ಣರಾಜಸಾಗರ ಜಲಾಶಯದಿಂದ ನೆರೆರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ಸ್ಥಗಿತ ಮಾಡಬೇಕು. ಬೆಳಗಾವಿ ಅಧಿವೇಶನದಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತು ಸಮಗ್ರ ಚರ್ಚೆ ನಡೆಸಿ ರಾಜ್ಯದ ಪರ ದೃಢ ನಿರ್ಧಾರ ಕೈಗೊಳ್ಳಬೇಕು, ಬರ ಪರಿಸ್ಥಿತಿಯಲ್ಲಿ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿ ರೂಪಿಸಿ ಜಲ ವಿವಾದಗಳ ಪರಿಹಾರಕ್ಕೆ ಮುಂದಾಗಬೇಕು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಪ್ರಧಾನಮಂತ್ರಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ. ಬೋರೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸುಜಾತಕೃಷ್ಣ ನೇತೃತ್ವ ವಹಿಸಿದ್ದರು.