ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಸಾಧ್ಯವಾಗದ ಮೇಲೆ ಬಸವರಾಜು ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ರೈತ ನಾಯಕ ಚಾಮರಸ ಮಾಲಿ ಪಾಟೀಲ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಾತೆತ್ತಿದರೆ ಧಮ್ ಬಗ್ಗೆ ಮಾತಾಡ್ತಾರೆ, ಅವರಿಗೆ ಧಮ್ ಇದ್ರೆ, ತಾಕತ್ ಇದ್ರೆ, ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು, ಇಲ್ಲ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಯಬೇಕು ಎಂದರು.
ಪೊಲೀಸ್ ಬಲದಿಂದ ಚಳವಳಿ ಹತ್ತಿಕ್ಕಲು ಸಾಧ್ಯವಿಲ್ಲ
ಪೊಲೀಸ್ ಬಲ ಬಳಸಿ ರೈತ ಚಳವಳಿಯನ್ನು ಬಗ್ಗು ಬಡಿಯಬೇಕು ಅಂತ ನಿಮ್ಮ ತಲೇಲಿದ್ರೆ ಅದು, ನಿಮ್ಮ ಮೂರ್ಖತನ. ರೈತ ಚಳವಳಿ ರಬ್ಬರ್ ಚೆಂಡಿದ್ದಂತೆ, ನೀವು ಎಷ್ಟು ಬಲವಾಗಿ ಹೊಡೆಯುತ್ತಿರೋ ಅಷ್ಟು ಮೇಲಕ್ಕೆ ಚಿಮ್ಮುತ್ತೆ, ಸರ್ಕಾರಕ್ಕೆ ತನ್ನ ತಪ್ಪುನ್ನು ಅರ್ಥ ಮಾಡಿಸುತ್ತೇವೆ ಎಂದು ಹೇಳಿದರು.
ನಾಳೆಯಿಂದ ತೀವ್ರ ಹೋರಾಟ : ಸುನೀತಾ ಪುಟ್ಟಣ್ಣಯ್ಯ
ರೈತರು ದೇಶದ ಬೆನ್ನೆಲುಬು ಅಂತಾರೆ, ಆದರೆ ರೈತರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ, ಆದ್ದರಿಂದ ರೈತರು ಬೀದಿಯಲ್ಲಿ ನಿಂತು ಹೋರಾಟ ಮಾಡುವಂತಾಗಿದೆ.
ಎಷ್ಟು ದಿನ ರೈತರು ರಸ್ತೆಯಲ್ಲಿ ನಿಂತು ಹೋರಾಟ ಮಾಡಲು ಸಾಧ್ಯ, ಸರ್ಕಾರ ಬೇಡಿಕೆಗಳನ್ನು ಕೇಳಬೇಕಿತ್ತು. ಆದರೆ ಸರ್ಕಾರ ಸಮಸ್ಯೆಗಳನ್ನು ಕೇಳುವ ಪ್ರಯತ್ನವನ್ನು ಮಾಡಿಲ್ಲ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ದೂರಿದರು.
ರೈತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿ ಸರ್ಕಾರ ತಪ್ಪು ಮಾಡಿದೆ, ಸರ್ಕಾರ ನಮ್ಮ ಸಮಸ್ಯೆಗೆ ಪರಿಹಾರ ನೀಡಿದ್ದರೆ, ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ, ಮುಂದೆ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.