ಪ್ರತಿಭಟನೆಯ ಎಚ್ಚರಿಕೆ ನಡುವೆಯೂ ಭಾನುವಾರದಿಂದ (ಡಿ.4) ಹೆಜಮಾಡಿ ಟೋಲ್ಗೇಟ್ನಲ್ಲಿ ಪರಿಷ್ಕೃತ ದರ (ಸುರತ್ಕಲ್ ಟೋಲ್ ಸೇರಿಸಿ) ಸಂಗ್ರಹ ಮಾಡುವುದಾಗಿ ನವಯುಗ ಕಂಪನಿ ಪ್ರತಿಕಾ ಪ್ರಕಟಣೆ ಹೊರಡಿಸಿದೆ.
ಒಂದು ಕಡೆ ಉಡುಪಿ ಶಾಸಕ ರಘುಪತಿ ಭಟ್ ಸುರತ್ಕಲ್ ಟೋಲ್ನ್ನು ಮೂರು ಕಡೆ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇನ್ನೊಂದು ಕಡೆ ಕಾನೂನು ಬಾಹಿರ ಟೋಲ್ನ್ನು ಸಂಗ್ರಹಿಸದಂತೆ ಹೆಜಮಾಡಿ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಧರಣಿ ನಡೆಸುತ್ತಿದೆ. ಇದೆಲ್ಲದರ ನಡುವೆಯೂ ನವಯುಗ ಕಂಪನಿ ಪ್ರಾಧಿಕಾರದ ಸೂಚನೆಯಂತೆ ಟೋಲ್ ಸಂಗ್ರಹಿಸುವುದಾಗಿ ಹೇಳಿದೆ.
ಡಿಸೆಂಬರ್ 1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, “ಟೋಲ್ ಸಂಗ್ರಹಕ್ಕೂ ಮುನ್ನ ಪತ್ರಿಕಾ ಪ್ರಕಟಣೆ ಹೊರಡಿಸಬೇಕೆಂದು ನವಯುಗ ಕಂಪೆನಿಗೆ ಸೂಚಿಸಿದ್ದೇವೆ” ಎಂದು ಹೇಳಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ನವಯುಗ ಕಂಪೆನಿ ಪತ್ರಿಕಾ ಪ್ರಕಟಣೆ ಮೂಲಕ ಡಿಸೆಂಬರ್ 4ರಿಂದ ದುಪ್ಪಟ್ಟು ಟೋಲ್ ಸಂಗ್ರಹಕ್ಕೆ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ನವಯುಗ ಕಂಪೆನಿಯ ಪಿ.ಜಿ ಶಿವಪ್ರಸಾದ್ ರೈ, “ಹೆದ್ದಾರಿ ಪ್ರಾಧಿಕಾರವು ಪ್ರಕಟಣೆ ಹೊರಡಿಸಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚೆ ನಡೆಯುತ್ತಿದೆ. ಮೂರು ದಿನಗಳಲ್ಲಿ ರಾಜ್ಯ ಸರ್ಕಾರದ ಜೊತೆ ಸಭೆ ಕರೆದು ಚರ್ಚಿಸಲಾಗುತ್ತದೆ. ಅಲ್ಲಿನ ತನಕ ಷರಿಷ್ಕೃತ ದರ ವಸೂಲಿ ಮಾಡಬಾರದೆಂದು ಇಲ್ಲಿನ ಶಾಸಕರು, ಪ್ರಭಾರ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸದ್ಯ ಚರ್ಚೆ ನಡೆಯುತ್ತಿದ್ದು, ಸಭೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದರು.