ಹಳ್ಳಗಳು ಹಾಗೂ ಕೆರೆಕಟ್ಟೆಗಳನ್ನು ರೈತರು ಯಾರು ದಯವಿಟ್ಟು ಒತ್ತುವರಿ ಮಾಡಿಕೊಳ್ಳಬೇಡಿ, ಒತ್ತುವರಿ ಮಾಡಿಕೊಂಡಿ ರುವವರು ನೀವುಗಳೇ ತೆರವುಗೊಳಿಸಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರೈತರಿಗೆ ಸಲಹೆ ನೀಡಿದರು.
ಮಂಡ್ಯ ತಾಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ದುದ್ದ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಭರ್ತಿಯಾಗಿರುವ ದುದ್ದ ಕೆರೆಯಿಂದ 300 ರಿಂದ 400 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಬೆಳೆ ಬೆಳೆಯಲು ನೀರು ಸಿಗುತ್ತದೆ ಎಂದು ಹೇಳಿದರು.
ಹಗಲು ರಾತ್ರಿ ಎನ್ನದೆ ಇಂಜಿನಿಯರ್ ಗಳ ಜೊತೆ ದುದ್ದ ಗ್ರಾಮಸ್ಥರು ಸೇರಿ ಕೆರೆ ತುಂಬಿಸಿದ್ದಾರೆ.ಈ ಭಾಗದಲ್ಲಿ ಇದೇ ರೀತಿ ಕೆರೆಗಳು ತುಂಬಿ ಈ ಭಾಗದ ರೈತರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಎಲ್ಲರೂ ನೀರನ್ನು ಶೇಖರಣೆ ಮಾಡಿಕೊಳ್ಳುವ ಹಾಗೂ ಬಳಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ಹಗಲು ರಾತ್ರಿ ಎನ್ನದೆ ಅಧಿಕಾರಿಗಳು ಊರಿಗೆ ಒಳ್ಳೆಯದಾಗಲಿ ಎಂದು ಕೆರೆ ತುಂಬಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ದುದ್ದ ಹೋಬಳಿಯಲ್ಲಿ 29 ಕೆರೆಗಳು ಇದ್ದು ಇದರಲ್ಲಿ 19 ಕೆರೆಗಳು ಶೇಕಡ ನೂರರಷ್ಟು ತುಂಬಿದ್ದು, ಶೇಕಡ 50ರಷ್ಟು ಮೇಲ್ಪಟ್ಟು 6 ಕೆರೆಗಳು, ಶೇಕಡ 25ರಷ್ಟು ಮೂರು ಕೆರೆಗಳು ಭರ್ತಿಯಾಗಿದೆ ಎಂದು ತಿಳಿಸಿದರು.
ಹೇಮಾವತಿ ಎಡದಂಡೆ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೆ.ಎಲ್.ಆನಂದ್ ಮಾತನಾಡಿ 2024-25 ನೇ ಸಾಲಿನಲ್ಲಿ ದೇವರ ಅನುಗ್ರಹದಿಂದ ಕೆರೆಗಳು ತುಂಬಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿದೆ,ರೈತರ ಮೊಗದಲ್ಲಿ ನಗುವಿದೆ ಎಂದು ಹೇಳಿದರು.
ಜನರು ಹಳ್ಳಗಳನ್ನು ಒತ್ತುವರಿ ಮಾಡಿಕೊಳ್ಳಬೇಡಿ,ಹಳ್ಳಗಳಿಗೆ ಕಟ್ಟೆ ಹಾಕಬೇಡಿ ಇದರಿಂದ ಬೆಳೆಗಳಿಗೆ ನಷ್ಟವಾಗುತ್ತದೆ.ಕೆರಗಳನ್ನು ತುಂಬಿಸಲು ಇಲ್ಲಿನ ಜನ ರಾತ್ರಿಯ ವೇಳೆಯಲ್ಲೂ ಸಹಾಯ ಮಾಡಿ ನಮ್ಮಗಳ ಜೊತೆ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶ್ರೀನಾಥ್, ಸಹಾಯಕ ಇಂಜಿನಿಯರ್ ಪುನೀತ್, ಗ್ರಾಮದ ಮುಖಂಡರಾದ ಚೇರ್ಮನ್ ನರಸಿಂಹೇಗೌಡ, ಶ್ರೀನಿವಾಸಯ್ಯ, ಗೋಪಾಲ್, ನಾಗಶೆಟ್ಟಿ, ಯುವ ಮುಖಂಡರಾದ ಪ್ರಶೀಲ್, ಸೋಮಶೇಖರ್ ಹಾಜರಿದ್ದರು