ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆ ಬಂದ್ ಮಾಡಿ ಕಬ್ಬು ಸಾಗಿಸಲು ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಯಶೆಟ್ಟಿಪುರ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ ರಸ್ತೆ ಮುಚ್ಚಿರುವವರ ಬೆಂಬಲಕ್ಕೆ ಶಾಸಕ ರವಿಕುಮಾರ್ ಗಣಿಗ ನಿಂತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮಾಳೆ ಹಳ್ಳದಿಂದ ಹುಲ್ಲೆಕಟ್ಟೆ ಜಮೀನಿನವರೆಗೆ ಕಳೆದ 80 ವರ್ಷದಿಂದ ಸರ್ವೆ ನಂ 20 ರಿಂದ 133 ರಲ್ಲಿ ಸಾರ್ವಜನಿಕ ಬಂಡಿದಾರಿ ಇತ್ತು.ಇದೀಗ ರಾಜಕೀಯ ದ್ವೇಷದಿಂದ ಬಂಡಿದಾರಿ ಅತಿಕ್ರಮಿಸಿ ಜೆಸಿಬಿ ಮೂಲಕ ಮುಚ್ಚಿ,ರೈತ ಮಹಿಳೆ ವಿಜಯಮ್ಮರಿಗೆ ಕಬ್ಬು ಸಾಗಿಸಲು ಅಡ್ಡಿಪಡಿಸಿ ದೌರ್ಜನ್ಯ ಮಾಡಲಾಗಿದೆ ಎಂದು ದೂರಿದರು.
ಬಂಡಿ ದಾರಿಗೂ, ರಸ್ತೆಗೆ ಅಡ್ಡಿಪಡಿಸುತ್ತಿರುವ ಭೂ ಮಾಲೀಕತ್ವಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯದ ದ್ವೇಷದ ಹಿನ್ನೆಲೆಯಲ್ಲಿ ಕಬ್ಬುಸಾಗಾಟಕ್ಕೆ ಅಡ್ಡಿ ಮಾಡಲಾಗುತ್ತಿದೆ, ಕಿಡಿಗೇಡಿಗಳ ವಿರುದ್ಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಕಾನೂನು ಕ್ರಮ ಕೈಗೊಂಡಿಲ್ಲ, ಬದಲಾಗಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಸಾರ್ವಜನಿಕ ರಸ್ತೆ ಬಂದ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅನ್ಯಾಯ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವ ಶಾಸಕ ರವಿಕುಮಾರ್ ಗಣಿಗ ಒತ್ತಡಕ್ಕೆ ಮಣಿಯದೇ ಅಧಿಕಾರಿಗಳು ಕಾನೂನಿಗೆ ಮಾನ್ಯತೆ ನೀಡಿ ಕಬ್ಬು ಸಾಗಾಣಿಕೆಗೆ ಅವಕಾಶ ನೀಡಬೇಕು, ಸಾರ್ವಜನಿಕ ರಸ್ತೆ ಮುಚ್ಚಿರುವುದನ್ನು ತೆರೆವುಗೊಳಿಸಿ ಕಬ್ಬು ಸಾಗಾಣಿಕೆಗೆ ಪೊಲೀಸ್ ರಕ್ಷಣೆ ನೀಡಬೇಕು, ಮಾಳೆ ಹಳ್ಳದಿಂದ ಆಬಲವಾಡಿಗೆ ಹೋಗುವ ಬಂಡಿದಾರಿ ನಕಾಶೆ ರಸ್ತೆ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಗ್ರಾ.ಪಂ ಸದಸ್ಯ ಕೃಷ್ಣೇಗೌಡ, ವಿಜಯಮ್ಮ ನಂದೀಶ್, ಆರ್ ಕೆ ಜಯರಾಮ್, ಯೋಗೇಶ್, ಕೃಷ್ಣ, ರಮೇಶ್, ಸುಷ್ಮಾ ಮತ್ತಿತರರು ವಹಿಸಿದ್ದರು.