ಭಾರತದ ನಂಬರ್ 1 ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ರೂ. 20 ಕೋಟಿ ನೀಡದಿದ್ದರೆ ನಿಮ್ಮನ್ನು ಹತ್ಯೆಗೈಯ್ಯುವುದಾಗಿ ಮುಕೇಶ್ ಅಂಬಾನಿಗೆ ವ್ಯಕ್ತಿಯೊಬ್ಬ ಈಮೇಲ್ ಮೂಲಕ ಬೆದರಿಕೆ ಒಡ್ಡಿದ್ದಾನೆ ಎಂದು ವರದಿಯಾಗಿದೆ.
ಮುಂಬೈ ಪೊಲೀಸರ ಪ್ರಕಾರ, ಬೆದರಿಕೆ ಇಮೇಲ್ನಲ್ಲಿ ”ಒಂದು ವೇಳೆ ನೀವು ನಮಗೆ ರೂ. 20 ಕೋಟಿ ಹಣವನ್ನು ನೀಡದಿದ್ದರೆ ನಾವು ನಿಮ್ಮನ್ನು ಹತ್ಯೆಗೈಯ್ಯುತ್ತೇವೆ. ಭಾರತದಲ್ಲಿ ನಮ್ಮ ಅತ್ಯುತ್ತಮ ಶೂಟರ್ಗಳಿದ್ದಾರೆ” ಎಂದು ಬರೆಯಲಾಗಿದೆ.
ಅಕ್ಟೋಬರ್ 27ರಂದು ಶಾದಾಬ್ ಖಾನ್ ಎಂಬ ವ್ಯಕ್ತಿ ಈ ಬೆದರಿಕೆ ಈಮೇಲ್ನ್ನು ರವಾನಿಸಿದ್ದು, ತಮ್ಮಗಮನಕ್ಕೆ ಹತ್ಯೆ ಬೆದರಿಕೆಯ ವಿಷಯವನ್ನು ಮುಕೇಶ್ ಅಂಬಾನಿ ಅವರ ನಿವಾಸ ಅಂಟಿಲಿಯಾದಲ್ಲಿನ ಭದ್ರತಾ ಅಧಿಕಾರಿಗಳು ತಂದ ನಂತರ, ಅವರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಮೇಲ್ ಸ್ವೀಕರಿಸಿದ ನಂತರ, ಮುಕೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ, ಮುಂಬೈನ ಗಾಮ್ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬೆದರಿಕೆ ಒಡ್ಡುವ ಅನಾಮಿಕ ಕರೆ ಮಾಡುತ್ತಿದ್ದ ಬಿಹಾರದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಆತ ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸ ಅಂಟಿಲಿಯಾ ಸೇರಿದಂತೆ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ.
ಈ ಹಿಂದೆ 2021ರಲ್ಲಿ ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸದೆದುರು ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಪತ್ತೆಯಾಗಿತ್ತು. ಆ ಕಾರಿನ ಮಾಲಕರಾಗಿದ್ದ ಉದ್ಯಮಿ ಹೀರನ್ ನೆರೆಯ ಥಾಣೆ ಜಿಲ್ಲೆಯ ಕೆರೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಳೆದ ವರ್ಷದ ಮಾರ್ಚ್ 5ರಂದು ಪತ್ತೆಯಾಗಿದ್ದರು.