ಮದ್ದೂರು ಪಟ್ಟಣದ ಮದ್ದೂರಮ್ಮ ದೇವಾಲಯದ ಹಿಂಭಾಗದ ರೈಲ್ವೆ ಹಳಿ ಬಳಿ ಇರುವ ಕೊಲ್ಲಿಯಲ್ಲಿ ಈಜಲು ಇಳಿದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮದ್ದೂರು ಪಟ್ಟಣದ ರಾಮ್- ರಹೀಮ್ ನಗರದ ನಿವಾಸಿಗಳಾದ ಅಹಮ್ಮದ್ ಪಾಷಾ ಅವರ ಮಗ ಅಜಲಮ್ ಪಾಷಾ (16), ಅಕ್ಮಲ್ ಅವರ ಮಗ ಮಹಮ್ಮದ್ ಅಲಿ (13) ಸಾವಿಗೀಡಾದವರು.
ಗುರುವಾರವಷ್ಟೇ ಬಕ್ರೀದ್ ಆಚರಿಸಿದ್ದ ಈ ಬಾಲಕರು ಶನಿವಾರ ಸಂಜೆ ಕೊಲ್ಲಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಮಹಮ್ಮದ್ ಆಲಿ ನೀರಿನಲ್ಲಿ ಮುಳುಗುತ್ತಿದ್ದು, ಇದನ್ನು ಕಂಡ ಅಜಲಮ್ ಪಾಷಾ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ ನೀರಿನ ಸುಳಿಗೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದಾರೆ.
ಮೃತ ಬಾಲಕರ ಪೋಷಕರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು, ಪೊಲೀಸರು ಬಾಲಕರ ಮೃತ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ