ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಮಂಡ್ಯ ಜಿಲ್ಲಾ ಘಟಕ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಮಂಡ್ಯ ನಗರದಲ್ಲಿ ನಡೆಯಿತು.
ಮಂಡ್ಯ ನಗರದ ಮಾಂಡವ್ಯ ಎಕ್ಸೆಲೆನ್ಸ್ ಪಿಯು ಕಾಲೇಜಿನಲ್ಲಿ ನಡೆದ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ನಾಗರಾಜು ಅವರಿಂದ ನೂತನ ಅಧ್ಯಕ್ಷರಾದ ಭೈರೇಶ್ ಅಧಿಕಾರ ಸ್ವೀಕಾರ ಮಾಡಿದರು.
ಪ್ರಸ್ತುತ ಮದ್ದೂರು ತಾಲ್ಲೂಕಿನ ಭಾರತೀನಗರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಭೈರೇಶ್ ಅವರು ಮಂಡ್ಯ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅಧಿಕಾರ ಸ್ವೀಕರಿಸಿ ಮಾತನಾಡಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಅಧ್ಯಕ್ಷನಾದ ಮಾತ್ರಕ್ಕೆ ವಿಶೇಷವಾಗಿ ನೋಡುವ ಮನೋಭಾವ ಬೇಡ, ನಿಮ್ಮಲ್ಲಿ ನಾನು ಒಬ್ಬ. ನಾವೆಲ್ಲರು ಸೇವಾ ಮನೋಭಾವನೆಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ಕಾರ್ಯಕಾರಿಣಿಯ ಎಲ್ಲಾ ಸದಸ್ಯರ ಸಹಕಾರ ಬೇಕಾಗಿದೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮೆಲ್ಲರ ಸಲಹೆ-ಸೂಚನೆಗಳು ಅಗತ್ಯವಾಗಿವೆ, ನನಗೆ 24 ವರ್ಷಗಳ ಕಾಲ ಉಪನ್ಯಾಸಕನಾಗಿ, 3 ವರ್ಷಗಳ ಕಾಲ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ, ಈ ಅನುಭವವನ್ನು ಸಂಘದ ಅಭಿವೃದ್ಧಿಗೆ ಧಾರೆ ಎರೆಯುತ್ತೇನೆ ಎಂದರು.
ಡಿವಿಜಿ ಅವರ ನುಡಿಯಂತೆ ‘ಎಲ್ಲರೊಳಗೆ ಒಂದಾಗಿ’ ಕಾರ್ಯನಿರ್ವಹಿಸುವ ಹಂಬಲ ನನ್ನಲ್ಲಿದೆ, ಇದಕ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರ ಅತ್ಯಗತ್ಯ, ನನ್ನ ಅಧಿಕಾರಾವದಿಯಲ್ಲಿ ಕನಿಷ್ಠ ಒಂದೆರಡು ಉತ್ತಮವಾದ ಕೆಲಸಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರಿಕಂಠೇಗೌಡ ಅವರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘಕ್ಕೆ ಸ್ವಂತ ಕಟ್ಟಡವಿಲ್ಲ, ಇದನ್ನು ನಿರ್ಮಿಸಿಕೊಳ್ಳಲು ಶ್ರಮಿಸಬೇಕಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಉಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸ್ವಾಮಿ, ಶಿವಲಿಂಗೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಹೆಚ್.ಎನ್., ಖಜಾಂಚಿ ಗುರುಲಿಂಗೇಗೌಡ, ಸಹ ಕಾರ್ಯದರ್ಶಿಗಳಾದ ವೀಣಾ, ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಸತ್ಯ ಮತ್ತಿತರರಿದ್ದರು.