ದಲಿತರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಬಿಜೆಪಿ ಶಾಸಕ ಮುನಿರತ್ನ ನಡೆಯನ್ನು ಕರ್ನಾಟಕ ಜನಶಕ್ತಿ ಸಂಘಟನೆ ಖಂಡಿಸಿದೆ, ಅಲ್ಲದೇ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಪಕ್ಷದ ವರಿಷ್ಠರು ಮುನಿರತ್ನನನ್ನು ವಜಾ ಮಾಡುವಂತೆ ಆಗ್ರಹಿಸಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಬಿಜೆಪಿ ನಾಯಕರು ಅರ್ಥಹೀನ ಮಾತುಗಳನ್ನು ಆಡುವುದು, ಕೋಮು ಭಾವನೆಗಳನ್ನು ಬಿತ್ತುವಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇವರು ಸಮಾಜಕ್ಕೆ ಯಾವ ತರದ ಸಂದೇಶವನ್ನು ನೀಡಲು ಹೊರಟ್ಟಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರನಿಗೆ ಕರೆಯ ಮೂಲಕ ಹಣ ತಂದು ಕೊಡು ಎಂದು ಪೀಡಿಸುವುದಲ್ಲದೇ, ದಲಿತ ಒಕ್ಕಲಿಗ ಎಂದು ಪದ ಬಳಸಿ ಜಾತಿ ಜಾತಿಗಳ ನಡುವೆ ಸಾಮರಸ್ಯ ಕದಡುವ ಮಾತುಗಳನ್ನು ಆಡಿದ್ದಾರೆ. ಗುತ್ತಿಗೆದಾರನ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿರುವುದು ಮುನಿರತ್ನನ ಕೀಳುಮಟ್ಟದ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಅಯೋಗ್ಯರಿಗೆ ಬಾಯಿಗೆ ಬೀಗ ಜಡಿಯದಿದ್ದರೆ, ಸಮಾಜದ ಸ್ವಾಸ್ಥ್ಯ ಕೆಡುತ್ತದೆ, ಹಾಗಾಗಿ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇಂತಹ ಸಂಸ್ಕೃತಿ ಹೀನನನ್ನು ಶಾಸಕನ ಶಾಸಕತ್ವವನ್ನು ರದ್ದುಪಡಿಸಬೇಕು ,10 ವರ್ಷಗಳ ಕಾಲ ರಾಜಕೀಯ ನಿರ್ಬಂಧ ವಿಧಿಸುವಂತ ಕಠಿಣ ಕ್ರಮ ಜರುಗಿಸದಿದ್ದರೆ, ಇಂತಹ ಘಟನೆಗಳು ಮತ್ತೇ ಮತ್ತೇ ಸಂಭವಿಸುತ್ತಲೇ ಇರುತ್ತವೆ, ಆದ್ದರಿಂದ ಮುನಿರತ್ನ ವಿರುದ್ದ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.