Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಸಂಸ್ಥೆಯಿಂದ ನಿರ್ಗತಿಕರಿಗೆ ವಸತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ವಾತ್ಸಲ್ಯ ಯೋಜನೆಯಡಿ ರಾಜ್ಯಾದ್ಯಂತ 500 ನಿರ್ಗತಿಕರಿಗೆ ವಸತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಮಹಿಳಾ ವಿಜ್ಞಾನ ವಿಕಾಸ ಕಾರ್ಯಕ್ರಮದಡಿ ನಿರ್ಗತಿಕರ ಮಾಸಾಶನ ಪಡೆಯುತ್ತಿರುವ ಮಂಚಮ್ಮ ಎಂಬುವವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಥೆಯಿಂದ ಈಗಾಗಲೇ 750 ಮಂದಿಗೆ ಮನೆ ದುರಸ್ತಿ ಮಾಡಿಕೊಡಲಾಗಿದ್ದು, 1500 ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇವೆ. ಮಹಿಳಾ ಸಂಘ ಸಂಸ್ಥೆಗಳಿಗೆ ಸಾಲಸೌಲಭ್ಯ, ಕೆರೆ ಪುನರ್ ನಿರ್ಮಾಣ, ದೇವಾಲಯ ಅಭಿವೃದ್ದಿ, ಮದ್ಯವರ್ಜನ ಶಿಬಿರ, ಆರೋಗ್ಯ ಪರಿಕರಗಳ ಹಸ್ತಾಂತರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಪ್ಪ ಮಾತನಾಡಿ, ಶ್ರೀಧರ್ಮಸ್ಥಳ ಸಂಸ್ಥೆ ಈ ಭಾಗದ ಜನರಿಗೆ ವರದಾನವಾಗಿದೆ. ಬಡವರು, ನಿರ್ಗತಿಕರಿಗೆ ಸಹಾಯ ಹಸ್ತ ನೀಡುವ ಭಾಗವಾಗಿ ಮರಳಗಾಲ ಗ್ರಾಮದ ನಿರ್ಗತಿಕ ಮಂಚಮ್ಮ ಗುಡಿಸಿಲಿನಲ್ಲಿ ವಾಸವಿದ್ದುದ್ದನ್ನು ಗಮನಿಸಿ, ಅವರಿಗೆ ಪ್ರತಿ ತಿಂಗಳು 750 ರೂ ಮಾಸಾಶನ ನೀಡಿದ್ದಲ್ಲದೆ ಸುಮಾರು ಒಂದು ಲಕ್ಷ ರೂ.ವೆಚ್ಚದಲ್ಲಿ ಒಂದು ಸಣ್ಣ ಮನೆ ನಿರ್ಮಿಸಿಕೊಟ್ಟ ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ ಎಂದರು.

ಗ್ರಾ.ಪಂ.ಉಪಾಧ್ಯಕ್ಷೆ ಸುವರ್ಣ, ಪಿಡಿಒ ಶಿಲ್ಪ, ಮೈಸೂರು ಜಿಲ್ಲೆ ನಿರ್ದೇಶಕ ಹೆಚ್.ಎಲ್ ಮುರಳೀಧರ್, ಜಿಲ್ಲಾ ನಿರ್ದೇಶಕಿ ಚೇತನ, ಯೋಜನಾಧಿಕಾರಿ ಗಣಪತಿ ಭಟ್, ಕೃಷಿಕ ಸಮಾಜದ ಸುಬ್ರಹ್ಮಣ್ಯ, ಗ್ರಾಮದ ಯಜಮಾನ್ ಧನಂಜಯ, ವಿಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಕುಂತಲ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!