Saturday, September 21, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ| ಸರ್ವರ ಶ್ರಮದಿಂದ ಸಮ್ಮೇಳನ ಯಶಸ್ವಿಗೊಳಿಸೋಣ- ದಿನೇಶ್ ಗೂಳಿಗೌಡ

‘ಆತಿಥ್ಯ’ದ ನೆಲವೆಂಬ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ಒಗ್ಗಟ್ಟು ಹಾಗೂ ಶ್ರಮ ಅಗತ್ಯವೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಮ್ಮೇಳನ ಮಾಧ್ಯಮ ಸಮನ್ವಯ ಸಮಿತಿ ಅಧ್ಯಕ್ಷ ದಿನೇಶ್ ಗೂಳಿಗೌಡ ಅಭಿಪ್ರಾಯಿಸಿದರು.

ಮಂಡ್ಯ ನಗರದ ಹೊರ ವಲಯದಲ್ಲಿರುವ ಅಮರಾವತಿ ಹೋಟೇಲ್ ನಲ್ಲಿ ಆಯೋಜನೆಗೊಂಡಿದ್ದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಡ ಭಾಷೆ ಕನ್ನಡದ ಹಬ್ಬ ಜಿಲ್ಲೆಯಲ್ಲಿ ಮೂರನೇ ಬಾರಿಗೆ ಆಯೋಜನೆಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ಹರಡಬೇಕು. ಆ  ಮೂಲಕ ಮಂಡ್ಯ ಜಿಲ್ಲೆಯ ಸೊಗಡು ವಿಶ್ವವ್ಯಾಪಿ ಪಸರಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಮಂಡ್ಯ ಎಂದರೆ ಇಂಡಿಯಾ ಎಂದು ಸಂಬೋಧಿಸುತ್ತಾರೆ, ಆ ಅನ್ವರ್ಥ ಪದಕ್ಕೆ ಅರ್ಥ ಬರುವಂತೆ ಜಿಲ್ಲೆಯ ಎಲ್ಲ ಸ್ಥರದ ಜನತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತಾಗಬೇಕು. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಸಾಹಿತಿಗಳು, ರೈತರು, ಶಿಕ್ಷಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಆ ಸಂಬಂಧ ಲೇಖನಗಳು ಪ್ರಕಟವಾಗಲಿ ಎಂದು ಸಲಹೆ ನೀಡಿದರು.

ಸಮ್ಮೇಳನದ ಸಾರ್ಥಕತೆಯನ್ನು ಎತ್ತಿ ಹಿಡಿಯುವ ಸಾಹಿತ್ಯ ಲೇಖನಗಳು ಪ್ರಕಟಗೊಳ್ಳಬೇಕು. ಹೊರ ಜಿಲ್ಲೆ ರಾಜ್ಯದಿಂದ ಆಗಮಿಸುವ ಪತ್ರಕರ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಸಮ್ಮೇಳನ ಯಶಸ್ಸಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನಾಡಿನ ಲೇಖಕರ ಸಂದೇಶಗಳನ್ನು ಓದುಗರಿಗೆ ತಲುಪಿಸಬೇಕೆಂದರು.

ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಮಾಧ್ಯಮದ ಪಾತ್ರ ಅಪಾರ, ಸಮ್ಮೇಳನದ ಪ್ರತಿ ಚಟುವಟಿಕೆಗಳ ಸಮಗ್ರ ಪ್ರಚಾರ ಹಾಗೂ ಲೋಪದೋಷಗಳ ಪರಿಹಾರಕ್ಕೆ ಜಾಗೃತಿ, ಶುಚಿತ್ವಕ್ಕೆ ಆದ್ಯತೆ ಸೇರಿದಂತೆ ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ಸಿಗೆ ಮುಂದಾಗೋಣ ಎಂದು ಕರೆ ನೀಡಿದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ನಿರ್ಮಲ ಮಾತನಾಡಿ, ಮುಖ್ಯ ವೇದಿಕೆಯ ಸನಿಹದಲ್ಲೇ ಪತ್ರಕರ್ತರ ಗ್ಯಾಲರಿ ಹಾಗೂ ವಿದ್ಯುನ್ಮಾನ ಸುದ್ದಿಗಾರರ ವಾಹನಗಳ ತಂಗುದಾಣ, ಕಂಪ್ಯೂಟರ್ ವ್ಯವಸ್ಥೆ, ಇಂಟರ್ನೆಟ್ ಹಾಗೂ ಜನರೇಟರ್ ಸೌಲಭ್ಯ ಹಾಗೂ ಅತಿ ಗಣ್ಯರ ಪತ್ರಿಕಾಗೋಷ್ಠಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಸಮನ್ವಯ ಸಮಿತಿಯ ಸಂಚಾಲಕ ಅಶೋಕ್ ಜಯರಾಂ ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಭಾಗ್ಯ, ಆ ನಿಟ್ಟಿನಲ್ಲಿ ಒಂದಾಗಿ ಶ್ರಮಿಸೋಣ, ಹಬ್ಬದ ವಾತಾವರಣ ನಿರ್ಮಿಸಿ ಮಂಡ್ಯ ಜಿಲ್ಲೆಯ ಕಂಪು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ಪಸರಿಸಲು ಶ್ರಮಿಸೋಣವೆಂದರು.

ಪತ್ರಕರ್ತ ಸಿದ್ದು ಆರ್.ಜಿ.ಹಳ್ಳಿ ಮಾತನಾಡಿ, ನೆಟ್ವರ್ಕ್ ಕಿರಿಕಿರಿ ಹಾಗೂ ಪತ್ರಕರ್ತರ ಗ್ಯಾಲರಿಗೆ ಅನ್ಯರ ಪ್ರವೇಶಕ್ಕೆ ಕಡಿವಾಣ ಹಾಕಲು ಮಾರ್ಗೋಪಾಯ ಕಂಡುಕೊಳ್ಳಬೇಕು. ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರ ಸಂಖ್ಯೆಯನ್ನು ಅಖೈರುಗೊಳಿಸಿಕೊಳ್ಳಲು, ಅಧಿಕೃತ ಮಾಧ್ಯಮ ಸಂಸ್ಥೆಯ ಜೊತೆ ಪತ್ರ ವ್ಯವಹಾರ ನಡೆಸಬೇಕು. ವಿದ್ಯುತ್ ಸಂಪರ್ಕ ಸುಲಲಿತವಾಗಿರುವಂತೆ, ಟೆಕ್ನಿಸಿಯನ್ ನೇಮಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಆನಂದ್ ಮಾತನಾಡಿ, ಅನಧಿಕೃತ ಪತ್ರಕರ್ತರ ಕಡಿವಾಣಕ್ಕೆ ಯೋಜನೆ ರೂಪಿಸಬೇಕು. ಉತ್ತಮ ಗುಣಮಟ್ಟದ ಸೋಷಿಯಲ್ ಮೀಡಿಯಾ ಬಳಕೆಗೂ ಒತ್ತು ನೀಡಬೇಕೆಂದರು.

ಭೂ ದಾಖಲೆಗಳ ಉಪ ನಿರ್ದೇಶಕಿ ಮಮತಾ ಮಾತನಾಡಿ, ವಿವಿಧ ಕಂಪನಿಗಳ ಇಂಟರ್ ನೆಟ್ ವ್ಯವಸ್ಥೆ ಸುಲಲಿತ ವಿದ್ಯುತ್ ಸರಬರಾಜಿನ ಸರ್ಕ್ಯೂಟ್ ವ್ಯವಸ್ಥೆ ಜೊತೆಗೆ ಜಾಗೃತಿ ಫಲಕ ಅಳವಡಿಸಲು ಸಲಹೆ ನೀಡಿದರು.

ಪತ್ರಕರ್ತ ರಾಘವೇಂದ್ರ ಮಾತನಾಡಿ, ಕೆಲವು ಸ್ವಾರ್ಥಿಗಳು ಸಮ್ಮೇಳನ ಯಶಸ್ವಿಗೆ ಭಂಗ ತರಲು ಊಹಪೋಹಗಳನ್ನು ಹರಿದು ಬಿಡುತ್ತಾರೆ. ಅವುಗಳ ಪ್ರಚಾರ ಆದ್ಯತೆ ನೀಡದೇ ಸೂಕ್ತ ಸಮಜಾಯಿಸಿ ಪಡೆದು ಸುದ್ದಿಗಳನ್ನು ಪ್ರಕಟಿಸಲು ಒತ್ತು ನೀಡೋಣ ಎಂದು ಕರೆ ನೀಡಿದರು.

ಪತ್ರಕರ್ತ ಕೆ.ಸಿ.ಮಂಜುನಾಥ್ ಮಾತನಾಡಿ, ಸಕ್ಕರೆ ನಗರಿ ಮಂಡ್ಯದಲ್ಲಿ ಆಯೋಜನೆಗೊಳ್ಳುವ ಮೂರನೇ ಸಮ್ಮೇಳನ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಅಪಾರವಾಗಿದ್ದು, ಮೌಲ್ಯವಿಲ್ಲದ ಹಾಗೂ ಆವೇಶದ ಸುದ್ದಿಗಳಿಗೆ ಒತ್ತು ನೀಡದೇ, ಸಮ್ಮೇಳನದ ಗಾಂಭೀರ್ಯತೆಯನ್ನು ಎತ್ತಿ ಹಿಡಿಯುವ ಸುದ್ದಿಗಳ ಪತ್ರಕರ್ತರು ಪ್ರತಿ ವಿಭಾಗದ ಪತ್ರಕರ್ತರು ಸ್ಪಂದಿಸಬೇಕೆಂದರು.

ಸಭೆಯಲ್ಲಿ ಆಶಾಲತಾ ಪುಟ್ಟೇಗೌಡ, ಅನುಪಮಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪತ್ರಕರ್ತ ಬಸವೇಗೌಡ, ಸಮ್ಮೇಳನದ ವಿಶೇ‍‍ಷಾಧಿಕಾರಿ ಚಂದ್ರಶೇಖರ್, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗಾಧಿಕಾರಿ ಸುಧಾಮ ಸೇರಿದಂತೆ ಹಲವು ಅಧಿಕಾರಿಗಳು ಸಲಹೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!