ಪ್ರಧಾನಿ ನರೇಂದ್ರ ಮೋದಿಯವರ 3.0 ಸರ್ಕಾರ ಎನ್ಡಿಎ ಮಿತ್ರ ಪಕ್ಷಗಳ ವಿರುದ್ಧ ತಾರತಮ್ಯ ಮಾಡಿದೆ ಎಂದು ಶಿವಸೇನೆ ಏಕನಾಥ್ ಶಿಂಧೆ ಬಣ ಹಾಗೂ ಎನ್.ಸಿ.ಪಿ ಅಜಿತ್ ಪವಾರ್ ಬಣ ಅಸಮಾಧಾನ ಹೊರಹಾಕಿದೆ.
ಕಳೆದ ಸೋಮವಾರ ನರೇಂದ್ರ ಮೋದಿಯವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿದ್ದರು. ಮಹಾರಾಷ್ಟ್ರ ದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ 7 ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆದರೂ ಕೇವಲ ಒಂದು ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಅದು ರಾಜ್ಯ ಖಾತೆ ಸ್ಥಾನ. ಈ ಬಗ್ಗೆ ಏಕನಾಥ್ ಶಿಂಧೆ ಬಣದ ಮಾವಲ್ ಸಂಸದ ಶ್ರೀರಂಗ ಬಾರ್ನೆ ಮೋದಿ ಸರ್ಕಾರ ಪಕ್ಷಪಾತದಿಂದ ನಡೆದುಕೊಂಡಿದೆ.
ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನ ಗೆದ್ದಿರುವ ಜೆಡಿಎಸ್ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆಯ ಸಂಪುಟ ದರ್ಜೆ ಖಾತೆ ನೀಡಿದ್ದರೆ, ಬಿಹಾರದಲ್ಲಿ ಒಂದು ಸ್ಥಾನ ಗೆದ್ದಿರುವ ಜಿತನ್ ರಾಮ್ ಮಾಂಜಿ ಅವರಿಗೂ ಕೂಡ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ. ಇದು ತಾರತಮ್ಯದಿಂದ ಕೂಡಿದೆ ಎಂದು ಹೇಳಿರುವ ಶ್ರೀರಂಗ್ ಭಾರ್ನೆ ಮೋದಿ ಸರ್ಕಾರದಲ್ಲಿ ತಾರತಮ್ಯ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಣದ ಎನ್.ಸಿ.ಪಿ ಮಹಾರಾಷ್ಟ್ರದಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದು, ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಆದರೆ ಮೋದಿಯವರು ಆ ಪಕ್ಷಕ್ಕೂ ಕೇವಲ ರಾಜ್ಯ ಖಾತೆ ಒಪ್ಪಿಕೊಳ್ಳುವಂತೆ ಹೇಳಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಜಿತ್ ಪವಾರ್ ನಮ್ಮ ಪಕ್ಷದ ಪ್ರಫುಲ್ ಪಟೇಲ್ ರವರು ಈ ಹಿಂದೆ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದು,ಈಗ ರಾಜ್ಯ ಖಾತೆ ಒಪ್ಪಿಕೊಂಡರೆ ಹಿಂಬಡ್ತಿ ನೀಡಿದಂತಾಗುತ್ತದೆ. ಹಾಗಾಗಿ ನಮಗೆ ರಾಜ್ಯ ಖಾತೆ ಸಚಿವ ಸ್ಥಾನ ಬೇಡ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರು ತಮ್ಮದು ಎನ್ಡಿಎ ಸರ್ಕಾರ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತಾ, ಈ ಇಂದಿನ ಮೋದಿ ಸರ್ಕಾರದಂತೆ ಈ ಬಾರಿಯೂ ನಡೆದುಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಕೇಳಿ ಬಂದಿದೆ. ಅಲ್ಲದೇ ಪಿಡಿಪಿಯ ಚಂದ್ರಬಾಬು ನಾಯ್ದು ಪಕ್ಷಕ್ಕೂ ಮಹತ್ವದ ಖಾತೆಗಳನ್ನು ನೀಡಿಲ್ಲ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ಇದು ಎನ್ಡಿಎ ಮಿತ್ರ ಪಕ್ಷಗಳಲ್ಲಿ ಮುಂದಿನ ದಿನಗಳಲ್ಲಿ ಕಿಚ್ಚು ಹೊತ್ತಿಸಬಹುದೆಂದು ರಾಜಕೀಯ ಪಂಡಿತರು ಮಾತನಾಡುತ್ತಿದ್ದು, ಇದು ಎಲ್ಲಿಗೆ ಮುಟ್ಟುವುದೋ ಎಂದು ಕಾದು ನೋಡಬೇಕಿದೆ.