ಮಹಿಳೆ ನಾಲ್ಕು ಗೋಡೆಗೆ ಸೀಮಿತವಲ್ಲದೆ ಸಮಾಜಮುಖಿಯಾಗಿ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿಯಾದ ಗಿರೀಶ್ ಕುಮಾರ್ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಸಂಪಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿಸಿ ಟ್ರಸ್ಟ್ ಹೊಸಳ್ಳಿ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಸಾಲ ಕೊಡುವುದರ ಜೊತೆಗೆ ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರು ಜ್ಞಾನವಂತರಾಗಬೇಕು ಮತ್ತು ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದು ಅಮ್ಮನವರ ಹೆಬ್ಬಯಕೆ ಆಗಿದೆ. ಮಹಿಳೆಯರು ಸ್ವಚ್ಛತೆ ಶುಚಿತ್ವ ನೀರಿನ ಸದ್ಬಳಕೆಯನ್ನು ಮಾಡಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ರಂಗಭೂಮಿ ಕಲಾವಿದರಾದ ಸಂಪಳ್ಳಿ ಬಸವರಾಜ್ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ನಮ್ಮೂರಿನ ಕೆರೆಯನ್ನು ಹೂಳೆತ್ತಿ ಸ್ವಚ್ಛಗೊಳಿಸಿ ನೀರನ್ನು ತುಂಬಿಸುವ ಕೆಲಸವನ್ನು ಮಾಡುವುದರ ಜೊತೆಗೆ ನಿರ್ಗತಿಕರು ಮನೆ ಕಟ್ಟಿಕೊಡುವುದು ಅಂಗವಿಕಲರಿಗೆ ಸಲಕರಣೆಗಳನ್ನು ನೀಡುತ್ತಿದ್ದಾರೆ. ಈ ಒಂದು ಸಂಸ್ಥೆ ಹಣಕ್ಕೆ ಸೀಮಿತವಾಗಿಲ್ಲದೆ ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದವರಿಂದ ಸ್ವಚ್ಛತೆ ಶುಚಿತ್ವ, ನೀರಿನ ಸದ್ಬಳಕೆ, ಉಳಿತಾಯ, ಬಾಲ್ಯ ವಿವಾಹ, ಅಸ್ಪೃಶ್ಯತೆ, ಯುಟ್ಯೂಬ್ ಚಾನೆಲ್ ಮುಂತಾದ ವಿಷಯಗಳ ಬಗ್ಗೆ ಹಾಡುಗಳು, ಬೀದಿನಾಟಕದ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು.
ವೇದಿಕೆಯಲ್ಲಿ ವಲಯದ ಮೇಲ್ವಿಚಾರಕರಾದ ಪ್ರಶಾಂತ್, ಸೇವಾ ಪ್ರತಿನಿಧಿ ಸುಮಾ ರಾಣಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೋಭಾ, ಗ್ರಾಮದ ಮುಖಂಡರಾದ ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣಪ್ಪ, ಒಕ್ಕೂಟದ ಅಧ್ಯಕ್ಷರಾದ ಸುನಿತಾ, ಕಲಾವಿದರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಶೇಖರ ಹನಿಯಂಬಾಡಿ, ಯರಹಳ್ಳಿ ಹೊನ್ನೇಶ್, ಶಿವಕುಮಾರ್, ಹೆಚ್.ಬಿ.ರಾಮಕೃಷ್ಣ. ಅನುಸೂಯ ಇದ್ದರು.