ನಾಗಮಂಗಲ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಿದಾದ ಮಣ್ಣುಮಿಶ್ರಿತ ರಾಗಿಯನ್ನು ವಿತರಣೆ ಮಾಡಲಾಗಿದ್ದು, ಇದರಿಂದ ಆಕ್ರೋಶಗೊಂಡ ಪಡಿತರದಾರರು ತಿಪ್ಪೆಗೆ ಸುರಿದು ಆಕ್ರೋಶ ಹೊರ ಹಾಕಿದ ಘಟನೆ ಇಂದು ನಡೆದಿದೆ.
ಸುಖಧರೆ ಗ್ರಾಮದ ನ್ಯಾಯಬೆಲೆ ಅಂಗಡಿ– 66ರಲ್ಲಿ ಪಡಿತರ ಅಕ್ಕಿ ಜೊತೆ ವಿತರಣೆ ಮಾಡಿದ ರಾಗಿಯಲ್ಲಿ ಮಣ್ಣು ಮತ್ತು ಇಲಿ ಇಕ್ಕೆಗಳ ಮಿಶ್ರಣ ಕಂಡು ಬಂದಿದೆ, ಗುಣಮಟ್ಟ ಇಲ್ಲದ ಕಳಪೆ ರಾಗಿಯನ್ನು ಪಡಿತರದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಪಡಿತರದಾರರು ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಊರ ಹೊರಭಾಗದ ತಿಪ್ಪೆ ಗುಂಡಿಗೆ ರಾಗಿ ಸುರಿದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದರು.
ಸುಖಧರೆ ನ್ಯಾಯಬೆಲೆ ಅಂಗಡಿಯಲ್ಲಿ ಸೀಗೆಕೊಪ್ಪಲು, ಬೊಮ್ಮನಾಯಕನಹಳ್ಳಿ, ಮಲ್ಲಸಂದ್ರ ಮಠದಭುವನಹಳ್ಳಿ, ಮಲ್ಲನಾಯಕನಹಳ್ಳಿ ಗ್ರಾಮಗಳ 586 ಪಡಿತರದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಯಾಗಿದ್ದು ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದಾರೆ. ಆದರೆ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಮಣ್ಣುಕಲ್ಲು ಮಿಶ್ರಿತ ರಾಗಿಯನ್ನು ವಿತರಣೆ ಮಾಡಲಾಗುತ್ತಿದ್ದು ಈ ಬಗ್ಗೆ ಪ್ರಶ್ನಿಸಿದರೆ ಮಾಲೀಕ ಪಡಿತರ ಚೀಟಿದಾರರ ಜೊತೆ ಜಗಳಕ್ಕೆ ನಿಲ್ಲುತ್ತಾರೆ, ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಆಹಾರ ನಿರೀಕ್ಷಕರು ಯಾವುದೇ ಕ್ರಮ ವಹಿಸಿಲ್ಲ ಎಂದು ಪಡಿತರದಾರರು ದೂರಿದ್ಧಾರೆ.
ನಾಗಮಂಗಲ ತಾಲೂಕಿನ 97 ನ್ಯಾಯಬೆಲೆ ಅಂಗಡಿಗಳಲ್ಲಿ ಶುದ್ಧವಾದ ರಾಗಿಯನ್ನು ವಿತರಣೆ ಮಾಡುತ್ತಿದ್ದು ಸುಖಧರೆಯಲ್ಲಿ ಮಾತ್ರ ಕಳಪೆ ರಾಗಿ ವಿತರಣೆ ಮಾಡಲಾಗುತ್ತಿದೆ, ಆಹಾರ ಇಲಾಖೆಯವರು ಪಡಿತರ ರಾಗಿ ನಮ್ಮದಲ್ಲ, ಗೋದಾಮಿನಲ್ಲಿರುವ ರಾಗಿಯನ್ನು ಪರಿಶೀಲಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಸುಖದರೆ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದರೂ ಸಹ ಕ್ರಮ ಜರುಗಿಸುತ್ತಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮವಹಿಸಿ ಗುಣಮಟ್ಟದ ಪಡಿತರ ವಿತರಣೆಗೆ ಮುಂದಾಗಬೇಕು, ಕಲ್ಲು ಮಣ್ಣು ಮಿಶ್ರಿತ ರಾಗಿ ವಿತರಣೆ ಮಾಡಿರುವ ನಾಯ ಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ವಹಿಸಬೇಕೆಂದು ಪಡಿತರದಾರರು ಒತ್ತಾಯಿಸಿದ್ದಾರೆ.