ವರದಿ:ಪಟೇಲ್ ರಾಮಕೃಷ್ಣ
ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾಧಿಗಳ ಉದ್ಘೋಷದ ನಡುವೆ ವೈಕುಂಠ ಏಕಾದಶಿ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ವೈಕುಂಠ ಏಕಾದಶಿಯ ಪೂಜೆಯ ಪ್ರಯುಕ್ತ ವೈಕುಂಠ ದ್ವಾರ ತೆರೆದು ಪೂಜೆ ಮಾಡಲಾಯಿತು. ವೈಕುಂಠದ್ವಾರದ ಪಕ್ಕದಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮಿ ನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಬರುವಂತಹ ಭಕ್ತಾಧಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶ್ರೀವೆಂಕಟೇಶ್ವರ ಮೂರ್ತಿಗೆ ವಿಶೇಷ ಆಭರಣಗಳಿಂದ ಅಲಂಕಾರಗೊಳಿಸಿ ದೇವಸ್ಥಾನದ ಸುತ್ತ ವಿವಿಧ ಬಗೆಯ ಪುಪ್ಪಗಳಿಂದ ಅಲಂಕೃತಗೊಳಿಸಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಗಮನ ಸೆಳೆಯಿತು.
ಭಾರತೀನಗರ ಸುತ್ತ-ಮುತ್ತಲ ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿರುವುದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಭಕ್ತಾಧಿಗಳಿಗೆ ಪ್ರಸಾದವಾಗಿ ಕಜ್ಜಾಯ, ಬಾಳೆಹಣ್ಣು, ಬಾದಾಮಿ ಹಾಲು, ಕೇಸರಿಬಾತು, ಲಾಡು, ವಿತರಣೆ ಮಾಡಲಾಯಿತು. ಮೇಲುಕೋಟೆಯ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ರವರ ನೇತೃತ್ವದಲ್ಲಿ ಈ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಈ ಪೂಜಾ ಕೈಕಂಕರ್ಯದಲ್ಲಿ ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಭಾರತೀಎಜುಕೇಷನ್ ಟ್ರಸ್ಟ್ ಸಿಇಓ ಆಶಯ್ ಮಧು, ಮನ್ಮುಲ್ ನಿರ್ದೇಶಕಿ ಎಂ.ರೂಪ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮದ ಮುಖಂಡರು, ಯಜಮಾನರು, ರಾಜಕೀಯ ಗಣ್ಯರು ಭಾಗವಹಿಸಿದ್ದರು.
ಬೆಳಿಗ್ಗೆ 8 ಗಂಟೆಗೆ ಸೋಮು ತಂಡದವರಿಂದ ನಾದಸ್ವರ ಕಾರ್ಯಕ್ರಮ, ಆಲೂರು ಹರಿಹರ ಗಾನ ಭಜನಾ ಮಂಡಳಿ ಮಮತ ತಂಡದವರಿಂದ ಭಜನೆ, ಕಬ್ಬಾರೆ ಸುರೇಶ ತಂಡದವರಿಂದ ಕಂಸಾಳೆ ಕಾರ್ಯಕ್ರಮ, ಮದ್ದೂರು ಶೃತಿಸಾಗರ ಭಜನಾಮಂಡಳಿ, ಮಮತ ಜಗದೀಶ್ ತಂಡದವರಿಂದ ಭಕ್ತಿಗೀತೆಗಳ ಕಾರ್ಯಕ್ರಮ, ಸಂಜೆ 6 ಗಂಟೆಗೆ ಹರಿಕಥೆ ವಿದ್ವಾನ್ ಕಾರಸವಾಡಿ ಸಚಿನ್ ತಂಡದವರಿಂದ ಶ್ರೀನಿವಾಸ ಕಲ್ಯಾಣ ಕಥಾ ಕಲಾಪೇಕ್ಷ ಕಾರ್ಯಕ್ರಮಗಳು ನಡೆದವು. ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.