ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ,ಶರಣ ಪ್ರಕಾಶ್ ಪಾಟೀಲ್ ಹಾಗೂ ನಿಗಮದ ಅಧ್ಯಕ್ಷರ ರಾಜೀನಾಮೆಗೆ ಅಗ್ರಹಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮಂಡ್ಯನಗರದ ಸಂಜಯ ವೃತದಿಂದ ಬಿಜೆಪಿ ಪಕ್ಷದ ಎಸ್ ಟಿ ಮೋರ್ಚಾ ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು ದಕ್ಷ ಅಧಿಕಾರಿ ಸಾವಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರ, ದಲಿತ ದ್ರೋಹಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಹತ್ತಿರ ಮೆರವಣಿಗೆ ಬರುತ್ತಿದ್ದಂತೆ ಪೊಲೀಸರು ಹೊರ ಆವರಣದ ಗೇಟ್ ಮುಚ್ಚಿ ಪ್ರತಿಭಟನಾಕಾರರನ್ನು ತಡೆದರು. ಗೇಟಿನ ಕಂಬಿಯ ಮೇಲೆ ಏರಿದ ಕೆಲ ಕಾರ್ಯಕರ್ತರು ಒಳ ನುಗ್ಗಲು ಯತ್ನಿಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ, ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಬಿಜೆಪಿ ಪಕ್ಷ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹೊರ ಆವರಣದಲ್ಲಿ ತಡೆಯಲಾಗುತ್ತಿದೆ, ಜಿಲ್ಲಾಡಳಿತದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರದಿದ್ದಾಗ ಜಿಲ್ಲಾಧಿಕಾರಿ ಬರಲೇಬೇಕು ಎಂದು ಕೆಲಕಾಲ ಘೋಷಣೆ ಕೂಗಿದರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟ ಮಾರ್ಗದಲ್ಲಿ187 ಕೋಟಿ ದುರ್ಬಳಕೆ ಆಗಿದೆ, 89 ಕೋಟಿ ಹಣ 700 ಕ್ಕೂ ಹೆಚ್ಚು ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದೆ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ. ದಾವಣಗೆರೆ, ತೆಲಂಗಾಣ ರಾಜ್ಯದ ಹೈದರಾಬಾದ್ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಕೂಲಿ ಕಾರ್ಮಿಕರು, ದನ,ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ 2 ರಿಂದ 5 ಲಕ್ಷದವರೆಗೆ ಹಣ ಹಾಕಿ ವಿಥ್ ಡ್ರಾ ಮಾಡಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಹಗರಣದಲ್ಲಿ ಹಣ ಮರುವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರು ಅವರನ್ನು ಇದುವರೆಗೆ ಏಕೆ ಬಂಧಿಸಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ, ಬಹು ರಾಜ್ಯಗಳ ಹಗರಣವಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಡಾ. ಸಿದ್ದರಾಮಯ್ಯ, ಕೆ.ಎಸ್. ನಂಜುಂಡೇಗೌಡ, ಅಶೋಕ್ ಜಯರಾಮ್, ವಿವೇಕ್, ಎಚ್ ಆರ್ ಅಶೋಕ್ ಕುಮಾರ್ ಮತ್ತಿತರರಿದ್ದರು.