ಪಟಾಕಿ ಸಿಡಿತದ ವಿಷಾನಿಲದಿಂದ ಮನುಷ್ಯನ ಆರೋಗ್ಯವೇ ಹಾಳಾಗುತ್ತದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಹೇಳಿದರು.
ಮಂಡ್ಯ ತಾಲೂಕಿನ ಜೋಡಿ ಹೊಡಘಟ್ಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮಂಡ್ಯ, ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಮಂಡ್ಯ, ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಕೊಪ್ಪ ಇವರ ವತಿಯಿಂದ ನಡೆದ ‘ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಸಸಿ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೀಪಾವಳಿ ಮತ್ತು ಇತರೆ ಹಬ್ಬ ಆಚರಣೆಯ ಹೆಸರಿನಲ್ಲಿ ಪಟಾಕಿಗಳನ್ನು ಸಿಡಿಸಿ ಪರಿಸರ ಮಾಲಿನ್ಯ ಮಾಡಬಾರದು, ವಿಷಾನಿಲದಿಂದ ಮನುಷ್ಯನ ಆರೋಗ್ಯವೇ ಹಾಳಾಗುತ್ತದೆ, ಆದ್ದರಿಂದ ಮಕ್ಕಳೆಲ್ಲ ಪಟಾಕಿ ತ್ಯಜಿಸಿ ಸಸಿ ನೆಟ್ಟು ಪೋಸಿಸಿ ಪರಿಸರ ರಕ್ಷಣೆ ಮಾಡುವಂತೆ ತಿಳಿಸಿದರು.
ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ ಪರಂಪರೆ ಮತ್ತು ಬದುಕಿನ ಸಾಂಪ್ರದಾಯಿಕ ಶೈಲಿಗೆ ವಿರೋಧಿಯಾದ ಚಟುವಟಿಕೆ. ಹಿಂದಿನ ಕಾಲದಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಇರಲೇ ಇಲ್ಲ. ಕಳೆದ ಶತಮಾನದ ಆರಂಭದಲ್ಲಿ ಮತಾಪು ಸಿಡಿಸುವ ಗರ್ನಾಲು ಹೊಡೆಯುವ ಸಂಪ್ರದಾಯಗಳು ಆರಂಭವಾದವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಕೆ.ಆರ್. ಶಶಿಧರ ಈಚಗೆರೆ, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎಸ್.ಬೋರೇಗೌಡ, ಕೆಟಿ ನಾರಾಯಣ ರಾಜೇ ಅರಸ್,ರೋಟರಿ ಕ್ಲಬ್ ನ ಟೊಯೋಟ ಕಿರ್ಲೊಸ್ಕರ್ ಎ. ಆರ್.ಚಂದ್ರೇಶ್, ಶಿಕ್ಷಕಿಯರಾದ ಆರ್. ಚಂದ್ರಮತಿ, ಬಿ. ಸಿ. ಶಿಲ್ಪ, ಏನ್. ಕೆ. ಪವಿತ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.