ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ”ಚನ್ನಪಟ್ಟಣದಲ್ಲಿ ನಾವು ವೇದಿಕೆಯನ್ನು ಸೆಟ್ ಮಾಡಿಕೊಳ್ಳುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆ ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಹಿನ್ನಡೆಯಾಗಿತ್ತು. ಈಗ ನಮ್ಮ ಪಕ್ಷದ ಬೇಸ್ ಸ್ಟ್ರಾಂಗ್ ಮಾಡುತ್ತಿದ್ದೇವೆ. ನಮ್ಮ ಕೆಲಸಕ್ಕೆ ಜನರು ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ” ಎಂದರು.
ಇನ್ನು ಚನ್ನಪಟ್ಟಣದಿಂದ ನಮ್ಮ ಕುಟುಂಬದವರು ಸ್ಪರ್ಧಿಸುತ್ತಿಲ್ಲ. ನಾನೇ ಚನ್ನಪಟ್ಟಣದ ಅಭ್ಯರ್ಥಿ, ನನ್ನ ಹೆಸರಿನಲ್ಲಿಯೇ ಜನರ ಮುಂದೆ ಮತ ಕೇಳಲಾಗುತ್ತದೆ ಎಂದರು. ನಿಖಿಲ್ ಸ್ಪರ್ಧೆಯ ಬಗ್ಗೆ ಮಾತನಾಡಿ, ”ಅವರ ಪಕ್ಷದಲ್ಲಿ ಯಾರನ್ನು ಬೇಕಾದರೂ ನಿಲ್ಲಿಸಿಕೊಳ್ಳಲಿ. ಅದು ಅವರಿಗೆ ಬಿಟ್ಟಿದ್ದು. ಅದರ ಬಗ್ಗೆ ಮಾತನಾಡುವುದಿಲ್ಲ. ಚನ್ನಪಟ್ಟಣದಲ್ಲಿ ವ್ಯಕ್ತಿಯ ಮೇಲೆ ಚುನಾವಣೆ ನಡೆಯಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ನಾನು ಹೊರಟಿದ್ದೇನೆ. ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡರೆ ಸಾಕು” ಎಂದರು.