ಅಕ್ಷರ, ಅನ್ನ, ಆರೋಗ್ಯ ಸೇವೆಯನ್ನು ಒದಗಿಸುತ್ತಾ ಹತ್ತಾರು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ.ಮೀರಾಶಿವಲಿಂಗಯ್ಯ ಅವರಿಗೆ ಡಾಕ್ಟರೇಟ್ ನೀಡುವ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ತನ್ನ ಘನತೆ ಮತ್ತು ವೈಭವವನ್ನು ಹೆಚ್ಚಿಸಿಕೊಂಡಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಶ್ರಯದಲ್ಲಿ ನಡೆದ ಡಾ.ಮೀರಾ ಶಿವಲಿಂಗಯ್ಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀರಾ ಶಿವಲಿಂಗಯ್ಯ ನಮ್ಮ ಕೆ.ಆರ್.ನಗರದದವರು, ಅವರ ಬಗ್ಗೆ ಅವರ ಜೀವನ ಚರಿತ್ರೆಯಾದ ‘ಆಲದ ಮರ’ವನ್ನು ಓದುವ ಮೂಲಕ ಹೆಚ್ಚು ತಿಳಿದುಕೊಂಡಿದ್ದೇನೆ, ಒಬ್ಬ ಹೆಣ್ಣು ಮಗಳಾಗಿ ಇಷ್ಟು ಚಟುವಟಿಕೆಯಿಂದ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾದ ವಿಷಯವಲ್ಲ ಎಂದರು.
ದೇಶದಲ್ಲಿ 140 ಜನರಿದ್ದಾರೆ, ಒಬ್ಬೊಬ್ಬರು ಒಂದು ಜೀವನ ಚರಿತ್ರೆ ಬರೆದುಕೊಂಡರೂ140 ಕೋಟಿ ಪುಸ್ತಕಗಳಾಗುತ್ತದೆ, ಒಬ್ಬೊಬ್ಬರ ಚರಿತ್ರೆಯು ವಿಭಿನ್ನವಾಗಿರುತ್ತದೆ. ಪುಸ್ತಕಗಳನ್ನು ಓದುವುದರಿಂದ ಹಲವು ವಿಚಾರಗಳನ್ನು ಗ್ರಹಿಸಬಹುದಾಗಿದೆ ಎಂದರು.
ಒಬ್ಬರ ಸಾಧನೆಯನ್ನು ನೋಡಿ ಮತ್ತೊಬ್ಬರು ಸಂತೋಷ ಪಡುವುದು ಸಮಾಜಸೇವಾ ಕ್ಷೇತ್ರದಲ್ಲಿ ಮಾತ್ರ. ಆದರೆ ರಾಜಕೀಯ ಕ್ಷೇತ್ರದಲ್ಲಿ ಒಬ್ಬರನ್ನು ನೋಡಿ ಮತ್ತೊಬ್ಬರು ಅಸೂಯೆ ಪಡುತ್ತಾರೆ ಎಂದ ಅವರು, ಕೆ.ಆರ್.ನಗರದಿಂದ ಬಂದು ಮಂಡ್ಯಕ್ಕೆ ಹೊಂದಾಣಿಕೆಯಾಗಿ ಡಾ.ಮೀರಾ ಶಿವಲಿಂಗಯ್ಯ ಅವರು ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಸರ್ಕಾರವೇ ಎಲ್ಲ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ, ಸಮಾಜ ಸೇವಕರು ಕೈ ಜೋಡಿಸಿದಾಗ ಸಮಾಜದ ಪ್ರಗತಿ ಸಾಧ್ಯವಾಗಲಿದೆ ಎಂದರು.
ಡಾ.ಮೀರಾ ಶಿವಲಿಂಗಯ್ಯ ಅವರನ್ನು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ಹೆಚ್. ಎಲ್ ಪುಷ್ಪ ಸನ್ಮಾನಿಸಿದರು. ವಿಶ್ರಾಂತ ಪ್ರಾಚಾರ್ಯ ಡಾ.ಮ.ರಾಮಕೃಷ್ಣ ಅಭಿನಂದನಾ ನುಡಿ ನುಡಿದರು.
ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಡಾ.ಮೀರಾಶಿವಲಿಂಗಯ್ಯ, ನನಗೆ ಡಾಕ್ಟರೇಟ್ ಬಂದಿದ್ದು ಆಶ್ಚರ್ಯವನ್ನುಂಟು ಮಾಡಿದೆ. ಇದರೊಂದಿಗೆ ಸಂತೋಷವು ಆಗಿದೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ಎಸ್.ಬಿ.ಇ.ಟಿ ಅಧ್ಯಕ್ಷ ಡಾ.ಬಿ ಶಿವಲಿಂಗಯ್ಯ ಭಾಗವಹಿಸಲಿದ್ದು, ಸೋಮಶೇಖರ್, ವಿಜಯಲಕ್ಷ್ಮಿ ರಘುನಂದನ್, ಮಂಜುಳ ಉದಯ ಶಂಕರ್ ಹಾಗೂ ಚಂದಗಾಲು ಲೋಕೇಶ್ ಉಪಸ್ಥಿತರಿದ್ದರು.