ಮಂಡ್ಯ ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಸಭಾಂಗಣದಲ್ಲಿ ಮಂಡ್ಯ ಶುಗರ್ ಸಿಟಿ ಲಯನ್ಸ್ ಸಂಸ್ಥೆ ಮತ್ತು ಮಂಡ್ಯ ಸೆಂಟೆನಿಯಲ್ ಲಯನ್ಸ್ ಸಂಸ್ಥೆಯ ವತಿಯಿಂದ ವೈದ್ಯರ ಹಾಗೂ ಅಭಿಯಂತರರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಲಯನ್ಸ್ ನ ಮಾಜಿ ರಾಜ್ಯಪಾಲ ಕೆ.ದೇವೇಗೌಡ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಸಂಸ್ಥೆಯ ವಿಶೇಷವಾದ ಒಂದು ಅಂಶವೇನೆಂದರೆ ಸೇವಾ ಮನೋಭಾವ ಹಾಗೂ ಸಹಾಯವನ್ನು ಮಾಡುವುದಾಗಿದೆ ಎಂದು ತಿಳಿಸಿದರು.
105 ವರ್ಷಗಳ ಕಾಲ ಇತಿಹಾಸವಿರುವ ಲಯನ್ಸ್ ಸಂಸ್ಥೆಗೆ ಮಂಡ್ಯ ಜಿಲ್ಲೆಯ ಅಭಿಯಂತರರನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಲಯನ್ಸ್ ಸಂಸ್ಥೆಗೆ ಸದಸ್ಯರನ್ನಾಗಿ ಸೇರ್ಪಡೆ ಮಾಡುವುದರಲ್ಲಿ ಮಂಡ್ಯ ಜಿಲ್ಲೆಯು ಮೊದಲನೆಯ ಸ್ಥಾನದಲ್ಲಿದ್ದು, ಶಾಲಾ-ಕಾಲೇಜುಗಳಲ್ಲಿ ಕಲಿಯದೇ ಇರುವ ವಿಚಾರಗಳನ್ನು ಲಯನ್ ಸಂಸ್ಥೆಯಲ್ಲಿ ಕಲಿಯಬಹುದಾಗಿದೆ ಎಂದು ಹೇಳಿದರು.
ಸರ್.ಎಂ. ವಿಶ್ವೇಶ್ವರಯ್ಯ ರವರ ಜನ್ಮದಿನವನ್ನು ಅಭಿಯಂತರದ ದಿವಸ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಡಾಕ್ಟರ್ ಬಿ.ಸಿ. ರಾಯ್ ರವರ ಜನ್ಮದಿನವನ್ನು ವೈದ್ಯರ ದಿನಾಚರಣೆ ಎಂದು ಕರೆಯುತ್ತಾರೆ. ಲಯನ್ಸ್ ಸಂಸ್ಥೆಯು ಸೇವೆಯನ್ನು ನಿರಂತರವಾಗಿ ಮಾಡುವುದರ ಮೂಲಕ ಉತ್ತಮ ಸ್ಥಾನಕ್ಕೆ ಬರಬೇಕು ಎಂದು ಆಶಿಸಿದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಮಾಜಿ ರಾಜ್ಯಪಾಲ ಡಾ. ಜಿ. ಎ. ರಮೇಶ್ ರವರು ಅಭಿನಂದನಾ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಚೇತಾ, ಎಚ್. ಲತಾ ಹಾಗೂ ವೈದ್ಯರಾದ ಡಾ. ಕೆ.ಜಿ. ಶ್ರೀಕಲಾ ಹಾಗೂ ಡಾ. ಎಂ.ಎನ್. ಶಿಲ್ಪಾ ರವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ, ವಲಯಾಧ್ಯಕ್ಷರಾದ ಪ್ರಮೀಳಾ ನಾಗರಾಜು, ಕಾರ್ಯದರ್ಶಿ ಪ್ರತಿಮಾ ರಮೇಶ್, ಅಧ್ಯಕ್ಷರಾದ ಬೃಂದ ಸಿದ್ದೇಗೌಡ, ಶಶಿಕಲಾ ಬೋರೇಗೌಡ, ಖಜಾಂಚಿ ರೇಖಾ ಸಾಗರ್, ಕಾರ್ಯದರ್ಶಿ ಚಂದ್ರಕಲಾ ಮೋಹನ್ ಕುಮಾರ್, ಖಜಾಂಚಿ ಭವಾನಿ ಯೋಗಾನಂದ ಇನ್ನಿತರರಿದ್ದರು.