ಬಹುರಾಷ್ಟ್ರೀಯ ಕಂಪನಿಗಳು ಕುಲಾಂತರಿ ಆಹಾರವನ್ನು ನಮ್ಮ ಭಾರತ ದೇಶಕ್ಕೆ ತಂದು ನಮ್ಮ ಕೃಷಿ ಕ್ಷೇತ್ರ ಹಾಳುಗೆಡವಲು ಪಿತೂರಿ ನಡೆಸುತಿದ್ದು, ಇದನ್ನು ವಿರೋಧಿಸಿ ಸೆ. 29 ರಿಂದ ಅ.2 ರವರೆಗೆ ತುಮಕೂರು ಜಿಲ್ಲೆಯ ದೊಡ್ಡ ಹೊಸೂರು ಗ್ರಾಮದಲ್ಲಿ ಸತ್ಯಾಗ್ರಹ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಗಾಂಧಿಜಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಮಂಜುನಾಥ್ ಹೆಚ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹು ವಿಸ್ತಾರ ಹೊಂದಿದ ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ, ಹಿರಿಮೆ, ದೃಷ್ಟಿಕೋನ, ಆಯಾಮ, ಇತಿಹಾಸ ಹೊಂದಿದ್ದು, ಇಲ್ಲಿಗೆ ಬಹುರಾಷ್ಟ್ರೀಯ ಕಂಪನಿಗಳು “ಕುಲಾಂತರಿ ಆಹಾರವನ್ನು” ತರುವುದಕ್ಕೆ ಸಿದ್ಧತೆ ಮಾಡಲಾಗಿದ್ದು, ಇದು ಕೃಷಿ ವಿರೋಧಿ, ಸಮಾಜ ವಿರೋಧಿ, ಸಂಸ್ಕೃತಿ ವಿರೋಧಿ ಮತ್ತು ಪರಿಸರ ವಿರೋಧಿ ಕೃತ್ಯ ಎಸಗುವ ಹುನ್ನಾರವಾಗಿದೆ ಎಂದರು.
ಈ ಹಿನ್ನಲೆ ಸೆ. 29, 30ಮತ್ತು ಅ.01, 02ರಂದು ತುಮಕೂರು ಜಿಲ್ಲೆಯ ದೊಡ್ಡ ಹೊಸೂರು ಗ್ರಾಮದಲ್ಲಿ “ದೊಡ್ಡಹೊಸೂರು ಸತ್ಯಾಗ್ರಹ” ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಇತರೆ ಸಂಘ ಸಂಸ್ಥೆಗಳ ಮುಖಂಡರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಕುಲಾಂತರಿ ಕಾಯ್ದೆ ತಿರಸ್ಕರಿಸಿ ಹಾಗೂ ಸಹಜ ಬೇಸಾಯವನ್ನು ಪಂಚಾಯಿತಿ ಮೂಲಕ ಸ್ಥಾಪಿಸುವುದು. ಕರ್ನಾಟಕ ಸರ್ಕಾರ ಕುಲಾಂತರಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಬೇಕು, ಬೇಯರ್ – ಐಸಿಎಆರ್ ಒಪ್ಪಂದವನ್ನು ರದ್ದುಗೊಳಿಸಬೇಕು. ಭಾರತ ಸರ್ಕಾರ ಕುಲಾಂತರಿಗೆ ಸಂಬಂಧಪಟ್ಟ ಸಂಶೋಧನೆ ಹಾಗು ಅದಕ್ಕೆ ಪೂರೈಸುವ ಹಣಕಾಸುಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ. ಎಲ್. ಕೆಂಪುಗೌಡ, ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್.ನಾರಾಯಣ್, ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮಹೇಶ್ ಕುಮಾರ್, ಬಿ. ಎಂ.ನಂಜೇಗೌಡ, ಮುದ್ದೇಗೌಡ, ಶಾಂತ, ಯೋಗೇಶ್, ಶಂಕರಯ್ಯ ಇದ್ದರು.