ಸೌರಮಂಡಲದಲ್ಲಿ ಜೀವರಾಶಿಗಳಿರುವ ಆಶ್ರಯತಾಣ ಭೂಮಿಯೊಂದೇ, ಇಲ್ಲಿ ಹಸಿರುವನ ಹೆಚ್ಚಿಸುವ ಮೂಲಕ ಮುಂದಿನ ಪೀಳಿಗೆಗೆ ಸಂರಕ್ಷಿಸಿಡಬೇಕಿದೆ ಎಂದು ಎನ್ ಎಸ್ ಎಸ್ ಕಚೇರಿಯ ರಾಜ್ಯ ಕಾರ್ಯಕ್ರಮಾಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಯುವ ಮುನ್ನಡೆ ಮಂಗಲ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ, ಎನ್ ಎಸ್ ಎಸ್ ಘಟಕ ಸ್ನಾತಕೋತ್ತರ ಮಹಿಳಾ ಸರ್ಕಾರಿ ಕಾಲೇಜು, ಪ್ರಾದೇಶಿಕ ಅರಣ್ಯ ಇಲಾಖೆ ಮಂಡ್ಯ ವಲಯ ವತಿಯಿಂದ ಆಯೋಜಿಸಿದ್ದ ”ವಿಶ್ವ ಭೂಮಿ ದಿನ” ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯಲ್ಲಿನ ಸಂಪತ್ತನ್ನು ಹಿತಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ಬಿಟ್ಟು ಕೊಡದಿದ್ದರೆ ಜೀವರಾಶಿಗಳು ವಿನಾಶಗೊಳ್ಳುತ್ತವೆ, ಹಾಗಾಗಿ ತಮ್ಮ ತಮ್ಮ ಕೈಲಾದಷ್ಟು ಪರಿಸರ ರಕ್ಷಣೆ, ಬೆಳೆವಣಿಗೆಗೆ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಯೋಗೇಶ್ ಮಂಗಲ, ಸೌರಮಂಡಲದಲ್ಲಿ ಹೆಚ್ಚು ಮಹತ್ವ ಹೊಂದಿರುವ ಗ್ರಹಗಳಲ್ಲಿ ಭೂಮಿ ಪ್ರಮುಖವಾಗಿದೆ, ವೈವಿದ್ಯಮಯ ಜೀವಸಂಪತ್ತು, ಮನುಕುಲ ಸಂರಕ್ಷಣೆಯ ಜವಬ್ದಾರಿ ಅರಿತು, ಭೂಮಿ ರಕ್ಷಣೆ ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿ, ಪ್ರತಿಜ್ಞಾವಿಧಿ ಬೋಧಿಸಿ ಸ್ವೀಕರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ದಶರಥ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಭಾಗ್ಯ, ಸಂಪನ್ಮೂಲ ವ್ಯಕ್ತಿ ಅರುಣಕುಮಾರಿ, ಎನ್.ಎಸ್.ಎಸ್ ಘಟಕ ವಿದ್ಯಾರ್ಥಿನಿಯರು, ಸಿಬ್ಬಂದಿಗಳು ಮತ್ತಿತರು ಇದ್ದರು.