ಇಂದಿನ ಬಹುತೇಕ ಮಕ್ಕಳು ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸಿದ್ದಾರೆ. ಆದರೆ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಲ್ಲ, ಪೋಷಕರು ಮಕ್ಕಳ ಮೇಲೆ ಹೆಚ್ಚು ಅಂಕಗಳಿಸುವಂತೆ ಒತ್ತಡ ಹೇರುತ್ತಾರೆ. ಇದು ತಪ್ಪು, ಜೀವನದಲ್ಲಿ ಅಂಕಗಳೇ ಮುಖ್ಯ ಅಲ್ಲ. ಅಂಕಗಳಿಗಿಂತ ಮುಖ್ಯವಾದದ್ದು, ಯಾವುದೇ ಅಡೆತಡೆ ಬಂದರೂ ಎದುರಿಸಿ ನಿಲ್ಲಬಲ್ಲೆ ಎನ್ನುವ ನಿರ್ಭಿತಿಯೇ ನಿಜವಾದ ಶಿಕ್ಷಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಸಂತ ಜೋಸೆಫರ ಶಾಲೆಯ ಆವರಣದಲ್ಲಿ ನಡೆದ ಪೋಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜಿನನಲ್ಲಿ ಪಠ್ಯಕ್ರಮವಿದೆ, ಪ್ರಶ್ರೆ ಪತ್ರಿಕೆ ಇರುತ್ತದೆ, ಆಗಾಗಿ ಪರೀಕ್ಷೆ ಬರೆಯುತ್ತೇವೆ. ಆದರೆ ನಿಜವಾದ ಜೀವನದ ಪರೀಕ್ಷೆಯಲ್ಲಿ ಯಾವುದೇ ಪಠ್ಯಕ್ರಮ ಹಾಗೂ ಪ್ರಶ್ನೆಪತ್ರಿಕೆ ಇರುವುದಿಲ್ಲ. ಆಗಾಗಿ ನಿಜವಾದ ಶಿಕ್ಷಣವೇ ನಾವು ನೈತಿಕತೆಯಿಂದ ನಡೆಸುವ ಜೀವನವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಹಾಗೂ ಬಂಧು ಬಳಗದವರ ದೃಷ್ಟಿಕೋನ ಒಳ್ಳೆ ವ್ಯಕ್ತಿಯಾಗಬೇಕು. ಇದು ಕೂಡ ಶಿಕ್ಷಣ, ಇಂದಿನ ಪೀಳಿಗೆಯ ಮಕ್ಕಳು ಬೇರೆ ಯಾರನ್ನೋ ಮಾದರಿಯಾಗಿ ತೆಗೆದುಕೊಂಡು ನಾವು ಅಗಾಗಬೇಕು, ಹೀಗಾಗಬೇಕು ಎನ್ನುತ್ತಿರುತ್ತಾರೆ. ಆದರೆ ಇದು ಸರಿಯಲ್ಲ. ಮಕ್ಕಳು ತಮ್ಮ ಪೋಷಕರನ್ನೆ ಮಾದರಿಯನ್ನಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು. ಪೋಷಕರು ಮೊಬೈಲ್ ಹಾಗೂ ಟಿವಿ ನೋಡುತ್ತಾ ಮಕ್ಕಳನ್ನು ಓದಿ ಎನ್ನುವುದು ಕೂಡ ತಪ್ಪು. ಮೊಬೈಲ್ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಮೈಸೂರು ಟೆರಿಸಿಯನ್ ಕಾಲೇಜಿನ ನಿರ್ದೇಶಕ ಜುವಾನಿಟಾ, ಶಿಕ್ಷಣ ಸಂಸ್ಥೆಯ ಫಾದರ್ ಡಾ.ಲೂರ್ದೂ ಪ್ರಸಾದ ಜೊಸೆಫ್, ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಫಿಡೋಲಿನ್ ಸೇರಿದಂತೆ ಇನ್ನಿತರರು ಹಾಜರಿದ್ದರು.