ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ಸಹಕಾರ ತತ್ವದ ಅಡಿಯಲ್ಲಿ ಕೆಲಸ ಮಾಡಿ ಶ್ರೀಸಾಮಾನ್ಯನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಡಾ.ನಾರಾಯಣಗೌಡ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶಿವಜ್ಯೋತಿ ಗಾಣಿಗ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೆ ಆರ್ ಪೇಟೆ ಪಟ್ಟಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಉದ್ಘಾಟನೆಯಾಗಿ ಆರಂಭವಾಗಿರುವ ಶಿವಜ್ಯೋತಿ ಗಾಣಿಗ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ಲಾಭದತ್ತ ನಡೆಯುತ್ತಿದೆ. ಸಂಸ್ಥೆಗೆ 445 ಜನ ಷೇರುದಾರರಾಗಿದ್ದಾರೆ. ಸಮಾಜದ ಬಂಧುಗಳು ಸೇರಿದಂತೆ ಹಿಂದುಳಿದ ವರ್ಗಗಳ ಜನರು ಇಲ್ಲಿಯೇ ಆರ್ಥಿಕ ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬ್ಯಾಂಕ್ ಅತಿ ದೊಡ್ಡ ಬ್ಯಾಂಕ್ ಆಗಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಸಂಸ್ಥೆಯಾಗಿ ಬೆಳೆಯುವದರಲ್ಲಿ ಅನುಮಾನವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.
ನಾನು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ, ರಾಜ್ಯ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ, ತಾಲೂಕಿನ ಜನತೆ ಬದಲಾವಣೆ ಬಯಸಿ ಮೂರು ಬಾರಿ ಗೆದ್ದಿದ್ದ ನನಗೆ ಸೋಲಿನ ಕಹಿ ಉಣಿಸಿದ್ದಾರೆ. ನಾನು ಸೋಲಿಗೆ ಹೆದರಿ ಪಲಾಯನ ಮಾಡುವವನಲ್ಲ, ನಾನು ಸಚಿವನಾಗಿದ್ದಾಗ ತಾಲೂಕಿನ ಅಭಿವೃದ್ಧಿಗೆ 1800 ಕೋಟಿ ರೂ.ವಿಶೇಷ ಅನುದಾನ ತಂದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರಿಗೆ ತಾಲೂಕಿನ ಅಭಿವೃದ್ಧಿಗಾಗಿ ನಾನು ಯಾವುದೇ ಸಂಕೋಚವಿಲ್ಲದೆ ಭೇಟಿ ಮಾಡಿ ಸಹಾಯ ಪಡೆಯುತ್ತೇನೆ ಎಂದರು.
ನನ್ನ ಜೀವನದ ಕೊನೆಯ ಉಸಿರಿನವರೆಗೂ ರಾಜಕಾರಣ ಮಾಡುತ್ತೇನೆ. ನನ್ನ ವಿರುದ್ಧ ಟೀಕೆ ಮಾಡುವವರಿಗೆ ಈ ನಾರಾಯಣಗೌಡ ಯಾರು ಎಂಬುದನ್ನು ನನ್ನ ಕೆಲಸ ಕಾರ್ಯಗಳ ಮೂಲಕ ತೋರಿಸಿ ಉತ್ತರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಸೌಹಾರ್ದ ಜಿಲ್ಲಾ ಸಂಚಾಲಕ ಚಂದ್ರಶೇಖರಯ್ಯ, ನುಡಿ ಭಾರತಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಸವಗೌಡ, ಸಿದ್ದಲಿಂಗಯ್ಯ, ಬ್ಯಾಂಕಿನ ಸಿಇಒ ಶಿಲ್ಪ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಷೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದರು.